ಬೆಂಗಳೂರು: ರಾಜ್ಯದ ಕೆಲವು ಗುತ್ತಿಗೆದಾರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಈ ದಾಳಿ ನಡೆದಿದೆ.
11 ಗುತ್ತಿಗೆದಾರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ. ಲೋಕೋಪಯೋಗಿ ಸಚಿವರ ಮನೆ ಮೇಲೆ ದಾಳಿ ಆಗಿಲ್ಲ ಎಂದು ಐ.ಟಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವೃತ್ತದ ತನಿಖಾ ವಿಭಾಗದ ಮಹಾ ನಿರ್ದೇಶಕರು, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ ವರ್ಷದ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ರಾಜ್ಯದ ಐದು ಪ್ರಮುಖ ಇಲಾಖೆಗಳಿಂದ ಬಿಡುಗಡೆ ಮಾಡಿದ ಕಾಮಗಾರಿ ಬಿಲ್ ಕುರಿತು ಮಾಹಿತಿ ಕೇಳಿದ್ದರು.
ಕಳೆದ ವಾರ ಕಂದಾಯ, ಲೋಕೋಪಯೋಗಿ, ಇಂಧನ, ಫಶುಸಂಗೋಪನೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳು ಐ.ಟಿಗೆ ಮಾಹಿತಿ ಕಳುಹಿಸಿದ್ದವು. ಕಳೆದ ವರ್ಷ ಇದೇ ಅವಧಿಗೆ ಬಿಡುಗಡೆ ಆಗಿದ್ದ ಹಣದ ಜೊತೆ ಹೋಲಿಕೆ ಮಾಡಿದ ಬಳಿಕ ಕೆಲವು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಚುನಾವಣೆಗೆ ಹಣ ಬಿಡುಗಡೆ?
ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ನೆಪದಲ್ಲಿ ಚುನಾವಣೆಗೆ ಖರ್ಚು ಮಾಡಲು ಹಣ ಬಿಡುಗಡೆ ಮಾಡಿದೆ ಎಂದು ಐ.ಟಿ ಮೂಲಗಳು ಇತ್ತೀಚೆಗೆ ಆರೋಪಿಸಿಸಿದ್ದವು.