ಬೆಂಗಳೂರು: ರಾಜ್ಯದಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 20 ಪೈಸೆಯಿಂದ 40 ಪೈಸೆಗೆ ಹೆಚ್ಚಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅನುಮತಿ ನೀಡಿರುವುದು ಜನವಿರೋಧಿ ನಡೆ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದ (ಕಮ್ಯುನಿಸ್ಟ್) ರಾಜ್ಯ ಸಮಿತಿ ವಿರೋಧ ವ್ಯಕ್ತಪಡಿಸಿದೆ.
'ವಿದ್ಯುತ್ ಸರಬರಾಜು ಕಂಪನಿಗಳು ಸಾಮಾನ್ಯ ಬಳಕೆದಾರರನ್ನು ಸುಲಿಗೆ ಮಾಡಲು ಪರವಾನಿಗೆ ನೀಡಿದಂತಾಗಿದೆ. ಈಗಾಗಲೇ ದುಬಾರಿ ವಿದ್ಯುತ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ, ದರ ಏರಿಸುವುದನ್ನು ಕೆಆರ್ಇಸಿ ಪರಿಶೀಲಿಸಬೇಕಿತ್ತು' ಎಂದು ಎಸ್ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಉಮಾ ಹೇಳಿದರು.
'ಈಗಾಗಲೇ ಕೊರೊನಾದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ದರ ಏರಿಕೆ ಖಂಡನೀಯ. ಜನರನ್ನು ಮರಳು ಮಾಡುವ ಸರ್ಕಾರದ ಹುನ್ನಾರದ ವಿರುದ್ಧ ಜಾಗೃತರಾಗಬೇಕು. ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಬಾರದು' ಎಂದು ಒತ್ತಾಯಿಸಿದರು.