ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳವು ಮಾಡಿದ್ದ ಆರೋಪದಡಿ ನೇಪಾಳದ ಐವರು ಆರೋಪಿಗಳನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
‘ಮೀನಾ ರಾಜ್ ಭಟ್ (37), ನಾರಾಯಣ್ ಶ್ರೀಷ್ಠಾ (46), ತುಲಾರಾಮ್ ಭಟ್ (33), ಸಲೀಂ ಪಾಷಾ (24), ಶಿವ ಭಂಡಾರಿ (37) ಬಂಧಿತರು. ಅವರಿಂದ ₹ 10.89 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಏಜೆನ್ಸಿಯೊಂದರ ಮೂಲಕ ಭದ್ರತಾ ಸಿಬ್ಬಂದಿ ಆಗಿ ಕೆಲಸಕ್ಕೆ ಸೇರಿದ್ದರು. ಅಪಾರ್ಟ್ಮೆಂಟ್ ಸಮುಚ್ಚಯ ಹಾಗೂ ಕೆಲ ಕಂಪನಿಗಳ ಕಚೇರಿಗಳ ಭದ್ರತೆಗಾಗಿ ಆರೋಪಿಗಳನ್ನು ನಿಯೋಜಿಸಲಾಗಿತ್ತು’ ಎಂದೂ ತಿಳಿಸಿದರು.
‘ಎಚ್.ಬಿ.ಆರ್ ಬಡಾವಣೆಯಲ್ಲಿ ಇತ್ತೀಚೆಗೆ ಕೆಲ ಮನೆಗಳಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದರು.
‘ಐಷಾರಾಮಿ ಜೀವನ ನಡೆಸುವುದಕ್ಕಾಗಿ ಆರೋಪಿಗಳೇ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದರು.
‘105 ಗ್ರಾಂ ಚಿನ್ನಾಭರಣ, 1,290 ಗ್ರಾಂ ಬೆಳ್ಳಿ ಸಾಮಗ್ರಿ, 8 ವಿದೇಶಿ ಕರೆನ್ಸಿ ಹಾಗೂ ₹ 12,000 ನಗದು ಆರೋಪಿಗಳ ಬಳಿ ಸಿಕ್ಕಿದೆ’ ಎಂದರು.