ಬೆಂಗಳೂರು: ನೆರೆ ಮತ್ತು ಬರ ಪರಿಸ್ಥಿತಿ ನಿರ್ವಹಣೆಗೆ ನೆರವು ನೀಡಲು ನಿರ್ಲಕ್ಷ್ಯ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆ- ಬರ ಸಂತ್ರಸ್ತರ ಬಹಿರಂಗ ಅಧಿವೇಶನ ನಡೆಯುತ್ತಿದೆ.
ರಾಜ್ಯದ ಬರ-ನೆರೆ ನಿರ್ವಹಣೆಗೆ ₹1 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತರ ಅಧಿವೇಶನ ಒತ್ತಾಯಿಸಿತು.
ಕೇಂದ್ರದ ಎನ್ಡಿಆರ್ಎಫ್ಮತ್ತು ರಾಜ್ಯದ ಎಸ್ಡಿಆರ್ಎಫ್ ಮಾರ್ಗಸೂಚಿಗಳು ಅವೈಜ್ಞಾನಿಕವಾಗಿವೆ. ಇದನ್ನು ಪುನರ್ ಪರಿಶೀಲಿಸಿ ವಾಸ್ತವಿಕ ಮತ್ತು ವೈಜ್ಞಾನಿಕ ಮಾನದಂಡ ರೂಪಿಸಲು ಸಂತ್ರಸ್ತರು ಹಕ್ಕೊತ್ತಾಯ ಮಂಡಿಸಿದರು.
ಸಮಾವೇಶವೂ ಅಲ್ಲ, ಪ್ರತಿಭಟನೆಯೂ ಅಲ್ಲ. ಭಿಕ್ಷೆ ಬೇಡಲು ಬಂದಿಲ್ಲ. ಹಕ್ಕೊತ್ತಾಯ ಮಂಡನೆ ಮಾಡಲು ಬಂದಿದ್ದೇವೆ. ಮುಖ್ಯಮಂತ್ರಿಯೇ ಬಂದು ನಮ್ಮ ಹಕ್ಕೊತ್ತಾಯಗಳನ್ನು ಗೌರವದಿಂದ ಸ್ವೀಕರಿಸಬೇಕು ಎಂದುರೈತರು ಆಗ್ರಹಿಸಿದರು.
ನಾವು ಸಂವಿಧಾನದ ಮಾಲೀಕರು. ಹಸಿರು ಶಾಲು ತೊಟ್ಟವರು ನಾವು ರೈತರು. ನಮ್ಮ ಬೇಡಿಕೆ ಕೇಳಲು ಸರ್ಕಾರವೇ ನಮ್ಮಲ್ಲಿಗೆ ಬರಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.