ಬೆಂಗಳೂರು: ಸಿಂಗಸಂದ್ರದ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ನೀಡಿರುವ ದೂರು ಆಧರಿಸಿ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾಾರೆ.
‘ವಿದ್ಯಾರ್ಥಿಯೊಬ್ಬ ಬರೆದಿಟ್ಟಿದ್ದ ಪತ್ರ ದೊರೆತಿದ್ದು, ಅದರಲ್ಲಿ ‘ದಿನವೂ ಬೈಯ್ಯುತ್ತೀರ. ನಾವು ಎಲ್ಲಿಯೋ ಹೋಗಿ ದುಡಿದು ಬದುಕುತ್ತೇವೆ’ ಎಂದು ಬರೆಯಲಾಗಿದೆ. ಮಕ್ಕಳು ಬಾಲಕರಾಗಿರುವ ಕಾರಣ, ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
‘ಈ ನಾಲ್ವರೂ ಸಹಪಾಠಿಗಳು. ಡಿ. 24ರಂದು ಶಾಲೆಗೆ ಹೋಗುವುದಾಗಿ ಹೋದವರು ಮರಳಿ ಮನೆಗೆ ಬಂದಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲ ಕಡೆ ಹುಡುಕಾಡಿ ಬಳಿಕ ದೂರು ನೀಡಿದ್ದಾರೆ. ಪೋಷಕರು ಮತ್ತು ಶಾಲಾ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಒಬ್ಬ ವಿದ್ಯಾರ್ಥಿ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ವಿಶೇಷ ತಂಡ ಶೋಧ ನಡೆಸುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.