ಕೆಂಗೇರಿ: ದೇಶದ ಸಾಮಾಜಿಕ ಬದಲಾವಣೆಯಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ಅನನ್ಯವಾದುದು ಎಂದು ಅಖಿಲ ಕರ್ನಾಟಕ ಕನ್ನಡ ಸವಿತಾ ಮಹಾಮಂಡಲ ತಲಘಟ್ಟಪುರ ಶಾಖಾ ಅಧ್ಯಕ್ಷ ರಮೇಶ್ .ಪಿ ಹೇಳಿದರು.
ಅಖಿಲ ಕರ್ನಾಟಕ ಕನ್ನಡ ಸವಿತಾ ಮಹಾಮಂಡಲದ ವತಿಯಿಂದ ಹೆಮ್ಮಿಗೆಪುರ ವಾರ್ಡಿನ ವಾಜರಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀಶಿವಶರಣ ಹಡಪದ ಅಪ್ಪಣ್ಣ ಅವರ 889ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಡೆದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. 250ಕ್ಕೂ ಹೆಚ್ಚು ವಚನ ರಚಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದರು ಎಂದು ಹೇಳಿದರು.
ಕರ್ನಾಟಕ ಕನ್ನಡ ಸವಿತಾ ಮಹಾಮಂಡಲದ ರಾಜ್ಯಾಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿ, ಬಸವಣ್ಣ ಸಾಮಾಜಿಕ ಕ್ರಾಂತಿಗೆ ಮುಂದಾದಾಗ ಎಲ್ಲಾ ಕಾಯಕ ವರ್ಗದವರೂ ಬೆಂಬಲ ನೀಡಿದ್ದರು. ಈ ವೇಳೆ ಹಡಪದ ಅಪ್ಪಣ್ಣ ಬಸವಣ್ಣ ಅವರ ಕಾರ್ಯದರ್ಶಿಯಂತೆ ಮುಂದಾಳತ್ವ ವಹಿಸಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಮಹತ್ಕಾರ್ಯದಲ್ಲಿ ತೊಡಗಿದ್ದರು ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಖಿಲ ಕರ್ನಾಟಕ ಕನ್ನಡ ಸವಿತಾ ಮಹಾಮಂಡಲವು ಹಲವು ವರ್ಷಗಳಿಂದ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ. ಸಂಘದ ಆಶೋತ್ತರಗಳಿಗೆ ಪೂರಕವಾಗಿ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ , ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ವಾಜರಹಳ್ಳಿ ಶಶಿಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಕುಸುಮಾ ಶಿವಮಾದಯ್ಯ . ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಮೃತ್ ಗೌಡ, ವಾರ್ಡ್ ಅಧ್ಯಕ್ಷ ಪ್ರಕಾಶ್, ಸೌಮ್ಯ ಉಪಸ್ಥಿತರಿದ್ದರು.