ಬೆಂಗಳೂರು: ನಗರದ ಹಲವೆಡೆ ಶನಿವಾರ ಜೋರು ಮಳೆ ಸುರಿದು, ಕೆಲವೆಡೆ ರಸ್ತೆಗಳು ಜಲಾವೃತವಾದವು.
ಕೆಲದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಬಿಡುವು ಕೊಟ್ಟು ಮಳೆಯೂ ಸುರಿಯುತ್ತಿದೆ.
ಶುಕ್ರವಾರವೂ ಹಲವೆಡೆ ಮಳೆಯಾಗಿತ್ತು. ಶನಿವಾರ ಸಂಜೆ ಕೆಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಅಬ್ಬರದ ಮಳೆಯಾಯಿತು.
ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಮೆಜೆಸ್ಟಿಕ್, ಗಾಂಧಿ ನಗರ, ಮಲ್ಲೇಶ್ವರ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ಬಾಗ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬಿರುಸಿನ ಮಳೆ ಆಯಿತು.
ಹೆಬ್ಬಾಳ, ಆರ್.ಟಿ.ನಗರ, ಸಂಜಯ ನಗರ, ಶಿವಾಜಿನಗರ, ಅಶೋಕನಗರ, ಎಂ.ಜಿ.ರಸ್ತೆ, ಕೋರಮಂಗಲ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಸಾಧಾರಣ ಮಳೆ ಸುರಿಯಿತು.
ಮಳೆ ಜೋರಾದ ಸ್ಥಳಗಳಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಎರಡು ಅಡಿಯಷ್ಟು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಲಾಕ್ಡೌನ್ ಇದ್ದಿದ್ದರಿಂದ ವಾಹನಗಳ ಸಂಖ್ಯೆ ಕಡಿಮೆ ಇತ್ತು.
‘ನಗರದಲ್ಲಿ ಕೆಲದಿನಗಳಿಂದ ಮಳೆ ಆಗುತ್ತಿದೆ. ರಸ್ತೆಯಲ್ಲಿ ನೀರು ನಿಂತಿದ್ದ ದೂರುಗಳು ಬಿಟ್ಟರೆ, ಬೇರೆ ಯಾವ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.