ಬೆಂಗಳೂರು: ‘ಒಂದು ತಿಂಗಳಲ್ಲಿ ರಾಜ್ಯ ಮಟ್ಟದ ಮಾನಸಿಕ ಆರೋಗ್ಯ ಪ್ರಾಧಿಕಾರ ರಚಿಸಬೇಕು ಮತ್ತು ಈ ಪ್ರಾಧಿಕಾರವು ಎರಡು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಮಾನಸಿಕ ಆರೋಗ್ಯ ಮರುಪರಿಶೀಲನಾ ಮಂಡಳಿಗಳನ್ನು ರಚಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ವೆಂಕಟಾಪುರದ ಎನ್. ಸಂಜಯ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
‘ಕಾಯ್ದೆಯು 2018ರ ಜನವರಿ 6ರಿಂದಲೇ ಅನುಷ್ಠಾನದಲ್ಲಿದ್ದರೂ ರಾಜ್ಯ ಸರ್ಕಾರ ಜಾರಿಗೊಳಿಸದೇ ಇರುವುದು ದುರದೃಷ್ಟಕರ. ಆದ್ದರಿಂದ, ಕೋರ್ಟ್ನ ಆದೇಶ ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ನ್ಯಾಯಪೀಠ ಸರ್ಕಾರವನ್ನು ಎಚ್ಚರಿಸಿದೆ. ವಿಚಾರಣೆಯನ್ನು ಫೆಬ್ರುವರಿ 24ಕ್ಕೆ ಮುಂದೂಡಲಾಗಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೇಂದ್ರ ಸರ್ಕಾರ, ‘ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ–2017’ ಅನ್ನು ಜಾರಿಗೊಳಿಸಿದೆ.