ಬೆಂಗಳೂರು:ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ, ಜೊತೆಗೆ ದೆಹಲಿಯಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ರೈತರು ಹೆದ್ದಾರಿ ತಡೆ ನಡೆಸುತ್ತಿದ್ದಾರೆ.
ಯಲಹಂಕದ ಪೊಲೀಸ್ ಸ್ಟೇಷನ್ ವೃತ್ತದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.10 ನಿಮಿಷ ಮಾತ್ರ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಿದರು.
'ದೆಹಲಿ ರೈತರ ಹೋರಾಟಕ್ಕೆ ನಮ ಬೆಂಬಲ', ' ಕೃಷಿ ಕಾಯ್ದೆಯನ್ನು ರದ್ದು ಮಾಡದ ಕೇಂದ್ರಕ್ಕೆ ಧಿಕ್ಕಾರ' ಎಂದು ರೈತರು ಘೋಷಣೆ ಕೂಗಿದರು.ಶಾಂತಕುಮಾರ್ ಸೇರಿದಂತೆ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಸದ್ಯ, ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಪ್ರವೇಶಿಸದಂತೆ ದೆಹಲಿಯಲ್ಲಿ ಮೊಳೆಗಳನ್ನು ಹಾಕಿರುವುದನ್ನು ವಿರೋಧಿಸಿ, ರೈತರು ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ಮೊಳೆಗಳನ್ನು ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.