ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ನೀರಾನೆ (ಹಿಪ್ಪೊಪೊಟಮಸ್) ದಶ್ಯಾಳಿಗೆ ಜನಿಸಿದ ಮರಿ ಉಳಿದ ನೀರಾನೆಗಳ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದೆ.
‘ದಶ್ಯಾ ಬುಧವಾರ ಬೆಳಗಿನ ಜಾವ ಮರಿಗೆ ಜನ್ಮ ನೀಡಿದೆ. ಉಳಿದ ನೀರಾನೆಗಳ ಕಾಲ್ತುಳಿತಕ್ಕೆ ಸಿಲುಕಿ ಮರಿ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದರು.
ಇದುವರೆಗೆ ದಶ್ಯಾ ಆರು ಮರಿಗಳಿಗೆ ಜನ್ಮ ನೀಡಿದ್ದು, ನಾಲ್ಕು ಮರಿ ಮೃತಪಟ್ಟಿವೆ. ನಾಲ್ಕು ವರ್ಷದ ಅಲೋಕ ಮತ್ತು ಎರಡು ವರ್ಷದ ಸನ್ನಿ ತಾಯಿ ಜೊತೆ ಉದ್ಯಾನದ ಆಕರ್ಷಣೆಯಾಗಿವೆ.