ಬೆಂಗಳೂರು: ಜಾತ್ಯತೀತ, ಸಮಾನತೆಯ ಶಿಕ್ಷಣ ವ್ಯವಸ್ಥೆ ನಾಶ ಮಾಡುವ ಮೂಲಕ ಸಂವಿಧಾನವನ್ನೇ ಬುಡಮೇಲು ಮಾಡಲಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಭಾರತ ಮತ್ತೊಂದು ಶ್ರೀಲಂಕಾವಾಗಲಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಎಚ್ಚರಿಸಿದರು.
ಈಶ್ವರಚಂದ್ರ ವಿದ್ಯಾಸಾಗರ ಸ್ಮರಣಾರ್ಥ ಶುಕ್ರವಾರ ಎಐಡಿಎಸ್ಒ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಡವರು, ಶೋಷಿತರು, ಕೂಲಿ ಕಾರ್ಮಿಕರು, ಪರಿಶಿಷ್ಟರ ಮಕ್ಕಳು ಸರ್ಕಾರಿ ಶಾಲೆ ಆಶ್ರಯಿಸಿದ್ದಾರೆ.ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಸಮಾನ ಶಿಕ್ಷಣಕ್ಕೆ ಪೆಟ್ಟು ಬೀಳುತ್ತದೆ. ಸಂಸದರು, ಶಾಸಕರು, ರಾಜಕಾರಣಿಗಳ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಟೀಕಿಸಿದರು.
ಎಐಡಿಎಸ್ಒ ಅಖಿಲ ಭಾರತ ಅಧ್ಯಕ್ಷ ವಿ.ಎನ್. ರಾಜಶೇಖರ್, ಈಶ್ವರಚಂದ್ರ ವಿದ್ಯಾಸಾಗರ ಅವರ ಸ್ಮರಣೆ ದಿನದಂದು ವಿದ್ಯಾರ್ಥಿ ಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕು ಎಂಬ ಸಂಕಲ್ಪದೊಂದಿಗೆ ಚಳವಳಿ ಆರಂಭಿಸಿದ್ದಾರೆ. ಸಂಘ ಪರಿವಾರದ ಸಿದ್ಧಾಂತಕ್ಕೆ ಅನುಗುಣವಾಗಿ ಕೇಂದ್ರದ ಬಿಜೆಪಿ ಸರ್ಕಾರ ಶೈಕ್ಷಣಿಕ ನೀತಿಗಳನ್ನು ರಚಿಸುತ್ತಿದೆ. ಸರ್ಕಾರದ ಇಂತಹ ನಡೆ ವಿರುದ್ಧ ನಿರಂತರ ಚಳವಳಿ ಅಗತ್ಯ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಅಭಯಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಅಪೂರ್ವ, ಕಾರ್ಯದರ್ಶಿ ಕಲ್ಯಾಣ್ ಕುಮಾರ್,ವಿನಯ್ ಚಂದ್ರ ಉಪಸ್ಥಿತರಿದ್ದರು.