ಬೆಂಗಳೂರು: ವೈಟ್ಫೀಲ್ಡ್ ಸಮೀಪದ ಗರುಡಾಚಾರ್ ಪಾಳ್ಯ ವಾರ್ಡ್ನ ಪಟ್ಟಂದೂರು ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ಹೂಳು ಮತ್ತು ಕಸ ತುಂಬಿಕೊಂಡು ನೀರು ಹರಿದು ಹೋಗದೆ ಸುತ್ತಮುತ್ತಲ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಐಟಿಪಿಎಲ್ ಹಿಂಭಾಗದ ರಾಜಕಾಲುವೆಗೆ ಅಡ್ಡಲಾಗಿ ಸೇತುವೆ ಇದ್ದು, ಅದರಲ್ಲಿ ಹೂಳು ತುಂಬಿಕೊಂಡಿದೆ. ಕಸ–ಕಡ್ಡಿ, ಪೇಪರ್ ಮತ್ತು ಮಣ್ಣಿನಿಂದ ರಾಜಕಾಲುವೆ ತುಂಬಿ ಹೋಗಿದೆ. ಅದರ ಮೇಲೆ ಗಿಡಗಂಟಿಗಳು ಬೆಳೆದಿವೆ. ಹೀಗಾಗಿ, ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದ ಸ್ಥಿತಿ ಇದೆ.
‘ಮಳೆ ಬಂದರೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಕೊಳಚೆ ನೀರು ನಿಲ್ಲುತ್ತಿರುವ ಕಾರಣ ಜನರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಹೂಳೆತ್ತುವ ಕೆಲಸ ನಡೆದಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
‘ಹಲವು ದಿನಗಳಿಂದಲೂ ಇದೇ ಸ್ಥಿತಿ ಇದೆ. ರಾಜಕಾಲುವೆಯಲ್ಲಿರುವ ಕಸದ ರಾಶಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಕೂಡಲೇ ಸರಿಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಆರ್. ಮಂಜುನಾಥ್ ಒತ್ತಾಯಿಸಿದರು.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ವಾರ್ಡ್ ಎಂಜಿನಿಯರ್ ಪ್ರತಿಕ್ರಿಯಿಸಲಿಲ್ಲ.