ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿ ಇದೇ 19ಕ್ಕೆ ಮುಕ್ತಾಯಗೊಳ್ಳಲಿದೆ.
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಇದೇ ಸೋಮವಾರ ಸಭೆ ನಡೆಯಲಿದ್ದು, ಮಂಜುನಾಥ್ ಅವರ ಮುಂದುವರಿಕೆ ಅಥವಾ ಹೊಸ ನಿರ್ದೇಶಕರ ನೇಮಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
2007ರಿಂದ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಕಾರ್ಯನಿರ್ವಹಿಸಿದ್ದಾರೆ. ಅವರ ಅವಧಿ ಕಳೆದ ವರ್ಷವೇ ಮುಕ್ತಾಯಗೊಂಡಿತ್ತು. ಆಸ್ಪತ್ರೆ ಸಿಬ್ಬಂದಿ ಒತ್ತಾಯದ ಮೇರೆಗೆ ಒಂದು ವರ್ಷ ಮುಂದುವರಿಸಲಾಗಿತ್ತು.