ಬೆಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಎಂಟು ವಲಯಗಳ ಡಿಸಿಪಿಗಳ ಜತೆಗೆ ಭಾನುವಾರ ಸಭೆ ನಡೆಸಿದರು.
ಕೊರೊನಾ ನಿಯಂತ್ರಿಸಲು ಪೊಲೀಸರು ಯಾವ ರೀತಿ ಕೆಲಸ ಮಾಡಬೇಕು ಎಂಬುವರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆ ಜೊತೆ ಸೇರಿ ಕೆಲಸ ಮಾಡುವಂತೆಯೂ ಕಮಲ್ ಪಂತ್ ಅವರು ಡಿಸಿಪಿಗಳಿಗೆ ಸೂಚಿಸಿದರು.
‘ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕ್ವಾರಂಟೈನ್ ಪ್ರದೇಶಗಳಲ್ಲಿ ಸರ್ಕಾರದ ಸೂಚನೆಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಕೊರೊನಾ ಸೃಷ್ಟಿಸಿರುವ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಬಹಳ ಸಂಯಮದಿಂದ ವರ್ತಿಸಬೇಕು. ಠಾಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದೂ ಸಭೆಯಲ್ಲಿ ಕಮಲ್ ಪಂತ್ ಹೇಳಿದ್ದಾರೆ.
‘ಮುಂದಿನ ದಿನಗಳಲ್ಲಿ ಅಪರಾಧ ತಡೆಗಟ್ಟಲು ಸಮರ್ಥ ತನಿಖೆ ನಡೆಸಬೇಕು. ಪ್ರತಿ ಡಿಸಿಪಿ ವ್ಯಾಪ್ತಿಯಲ್ಲೂ ತಿಂಗಳಿಗೊಮ್ಮೆ ಸಭೆ ಮಾಡುತ್ತೇನೆ. ತನಿಖೆ ಪ್ರಗತಿಯನ್ನೂ ಪರಿಶೀಲಿಸುತ್ತೇನೆ’ ಎಂದೂ ತಿಳಿಸಿರುವುದಾಗಿ ಗೊತ್ತಾಗಿದೆ.