ಬೆಂಗಳೂರು: ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಮಾರಾಟ ಮಂಡಳಕ್ಕೆ ಈ ಹಿಂದೆ ನೀಡಿದ್ದ ₹10 ಕೋಟಿ ಸಾಲವನ್ನು ಸಹಾಯಧನವಾಗಿ ಪರಿವರ್ತಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
‘ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಹಾಮಂಡಳಕ್ಕೆ ₹10 ಕೋಟಿ ಸಾಲ ನೀಡಿದ್ದರು. ಸಾಲಕ್ಕೆ ನಿಯಮಿತವಾಗಿ ಬಡ್ಡಿ ಪಾವತಿಸಲಾಗುತ್ತಿದೆ. ಅಡಿಕೆ ದರ ಕುಸಿದ ಸಂದರ್ಭದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಮಾಡಿ ಅಡಿಕೆ ಖರೀದಿ ಮಾಡಲಾಗಿತ್ತು’ ಎಂದು ಸಂಸ್ಥೆಯ ಅಧ್ಯಕ್ಷ ಮಂಜಪ್ಪ ಹೊಸಬಾಳೆ ಮುಖ್ಯಮಂತ್ರಿಯವರಿಗೆ ವಿವರಿಸಿದರು.
ಇದರಿಂದ ಮಹಾಮಂಡಳ ನಷ್ಟಕ್ಕೆ ಗುರಿಯಾಗಿದೆ. ಆದ್ದರಿಂದ ಸಾಲದ ಮೊತ್ತವನ್ನು ಸಹಾಯ ಧನವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದು, ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಮಂಜಪ್ಪ ಹೇಳಿದ್ದಾರೆ.
ಮಹಾಮಂಡಳದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಸಂದರ್ಭದಲ್ಲಿ ಇದ್ದರು.