ಕೆಂಗೇರಿ: ಅನಾರೋಗ್ಯ ಪೀಡಿತ ಬಾಲಕಿಯ ವೈದ್ಯೆಯಾಗಬೇಕೆಂಬ ಮಹದಾಸೆ ಬಿಜಿಎಸ್ ಗ್ಲೆನ್ ಈಗಲ್ ಗ್ಲೋಬಲ್ ಆಸ್ಪತ್ರೆ ಅಂಗಳದಲ್ಲಿ ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಸಾಕಾರಗೊಂಡಿತು.
ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ‘ಮೇಕ್ ಎ ವಿಷ್ ಫೌಂಡೇಷನ್’ ಸಹಯೋಗದಲ್ಲಿ ಬಿಜಿಎಸ್ ಗ್ಲೆನ್ ಈಗಲ್ ಗ್ಲೋಬಲ್ ಆಸ್ಪತ್ರೆ ಆಡಳಿತ ಮಂಡಳಿ ಆಚರಿಸಿತು. ಈ ವೇಳೆ, 6ನೇ ತರಗತಿಯಲ್ಲಿ ಓದುತ್ತಿರುವ ಮಧುಶ್ರೀ ಎಂಬ 10 ವರ್ಷದ ಬಾಲಕಿಯನ್ನು ವೈದ್ಯೆಯನ್ನಾಗಿ ಮಾಡಿ ಆಸ್ಪತ್ರೆಯ ವಿವಿಧ ವಿಭಾಗಗಳ ಪರಿಚಯ ಮಾಡಿಸಿತು.
ಮಕ್ಕಳ ತಜ್ಞೆ ಡಾ.ನೀಮಾ ಭಟ್, ‘ಮಕ್ಕಳಲ್ಲಿ ಸುಪ್ತವಾಗಿರುವ ಆಸೆಗೆ ನೀರೆರೆದರೆ ಅವರ ವರ್ತನೆಯಲ್ಲಿ ಗಣನೀಯ ಬದಲಾವಣೆಯಾಗುವ ಸಾಧ್ಯತೆ ಇದೆ. ಅವರ ಮನೋಸ್ಥೈರ್ಯವೂ ವೃದ್ಧಿಸುತ್ತದೆ’ ಎಂದರು.
‘ಆಸ್ಪತ್ರೆಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಾಣವಾದರೆ ರೋಗಿ ಶೀಘ್ರದಲ್ಲೇ ಗುಣಮುಖವಾಗಲು ಸಾಧ್ಯ’ ಎಂದು ಆಸ್ಪತ್ರೆಯ ಸಿಇಒ ಶೈಲಜಾ ಸುರೇಶ್ ಹೇಳಿದರು.