ಕೆ.ಆರ್.ಪುರ: ‘ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಲಿಂಗ ಸಮಾನತೆ ಮತ್ತು ಮಾನವ ಹಕ್ಕುಗಳ ಅಗತ್ಯವನ್ನು ಬಲವಾಗಿ ಪ್ರತಿ ಪಾದಿಸಿದ್ದರು’ ಎಂದು ಮುಂಬೈನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ದಿಲೀಪ್ ಉಕೆ ಹೇಳಿದರು.
ಬಾಣಸವಾಡಿ ಸಮೀಪದ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಜೀವನದಲ್ಲಿ ನೀತಿಶಾಸ್ತ್ರವು ಭಾರತೀಯ ಪ್ರಜಾಪ್ರಭುತ್ವದ ಯಶಸ್ಸನ್ನು ಖಚಿತಪಡಿಸುತ್ತದೆ’ ಎಂದರು.
‘ಇತ್ತೀಚಿನ ವರ್ಷಗಳಲ್ಲಿ ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳಾಗುತ್ತಿವೆ. ವಿದ್ಯಾರ್ಥಿಗಳು ಇಂತಹ ಹೊಸ ಸಂಶೋಧನಾ ಪ್ರಕಟಣೆಗಳನ್ನು ಅಭ್ಯಾಸ ಮಾಡಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು’ ಎಂದು ಹೇಳಿದರು.
ಪುಣೆಯ ಸಿಂಬಾಸಿಸ್ ಕಾನೂನು ಶಾಲೆಯ ನಿರ್ದೇಶಕಿ ಡಾ.ಶಶಿಕಲಾ ಗುರುಪುರ ಮಾತನಾಡಿ, ‘ಪ್ರಸ್ತುತ ಕಾನೂನು ಪಠ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಎಂಆರ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡಿ ವತಿಯಿಂದ ‘ಕಾಂಟೆಂಪರರಿ ಲೀಗಲ್ ಅಫೇರ್ಸ್’ ಎನ್ನುವ ಪುಸ್ತಕ ಬಿಡುಗಡೆ ಮಾಡಲಾಯಿತು.