ಕೆ.ಆರ್.ಪುರ: ರೈಲು ಪ್ರಯಾಣಿಕರ ಸೌಕರ್ಯ ಸಮಿತಿಯ ತಂಡವು ವೈಟ್ಫಿಲ್ಡ್ ಮತ್ತು ಕೆ.ಆರ್.ಪುರ ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಿತು.
ಕುಡಿಯುವ ನೀರು, ಶೌಚಾಲಯ, ಟಿಕೆಟ್ ಕೌಂಟರ್, ಪ್ಲಾಟ್ ಫಾರಂ, ಕ್ಯಾಂಟೀನ್, ವಿದ್ಯುತ್ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿತು.
‘ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯ ಒದಗಿಸಲು ತಂಡ ಪರಿಶೀಲನೆ ನಡೆಸಿದೆ. ಎರಡೂ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಎದ್ದುಕಾಣುತ್ತಿದೆ. ಪ್ರಯಾಣಿಕರಿಗಾಗಿ ಹೆಚ್ಚು ಟಿಕೆಟ್ ಕೌಂಟರ್, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್ ಹೇಳಿದರು.
‘ಪ್ರಯಾಣಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಪ್ಲಾಟ್ಫಾರಂ ತೆರಳುವ ಸ್ಕೈ ವಾಕ್ ನಿರ್ಮಾಣ ಸೌಲಭ್ಯ ಒದಗಿಸಲು ಅಧ್ಯಕ್ಷರಿಗೆ ಮನವರಿಕೆ ಮಾಡಲಾಗಿದೆ’ ಎಂದು ಸಮಿತಿ ಸದಸ್ಯ ಪಿ.ಮಧುಸೂದನ ತಿಳಿಸಿದರು.