ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೂ ಮಾರ್ಗದರ್ಶಿ ಮೌಲ್ಯ ಕಡಿತ: ಪರಿಹಾರದಲ್ಲೂ ಇಳಿಕೆ

Published 6 ಮಾರ್ಚ್ 2024, 19:56 IST
Last Updated 6 ಮಾರ್ಚ್ 2024, 19:56 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಭೂ ಸ್ವಾಧೀನಕ್ಕೆ ಒಪ್ಪಿರುವ ರೈತರಿಗೆ ಪರಿಷ್ಕೃತ ಪರಿಹಾರ ನೀತಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು ಅರ್ಧದಷ್ಟು ಕಡಿತಗೊಳಿಸಿದೆ.

ಇದು ನಗರದ ಹೊರವಲಯದಲ್ಲಿ ಭೂ ಖರೀದಿಯ ಭರಾಟೆಯನ್ನು ಹೆಚ್ಚಿಸಲಿದೆ. ಭೂಮಿ ಕಳೆದುಕೊಂಡವರಿಗೆ ನೀಡಲಾದ ಪರಿಹಾರದಲ್ಲಿ ದೊಡ್ಡಮಟ್ಟದ ಕಡಿತ ಉಂಟಾಗಲಿದೆ.

ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಹೊರಡಿಸಿರುವ ಈ ಅಧಿಸೂಚನೆಯು ಬೆಂಗಳೂರಿನ ಪೂರ್ವ, ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಹರಡಿಕೊಂಡಿರುವ 73-ಕಿಮೀ ಪಿಆರ್‌ಆರ್‌ಗೆ ಹೊಂದಿಕೊಂಡಿರುವ ಆಸ್ತಿಗಳ ಮಾರ್ಗದರ್ಶನ ಮೌಲ್ಯವನ್ನು ಕಡಿಮೆ ಮಾಡಿದೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಎಂದೂ ಕರೆಯಲಾಗಿರುವ ಪಿಆರ್‌ಆರ್‌ ಯೋಜನೆಯಡಿ ಭೂ ಸ್ವಾಧೀನಕ್ಕೆ ಸೂಚಿಸಲಾದ 2,560 ಎಕರೆ ಭೂಮಿಗೆ ಐದು ತಿಂಗಳ ಹಿಂದೆ ನಿಗದಿಪಡಿಸಿದ್ದ ಮೌಲ್ಯ ಈಗ ಕಡಿಮೆಯಾಗಲಿದೆ. 

ಮಾರ್ಗದರ್ಶಿ ಮೌಲ್ಯದ ನಾಲ್ಕು ಪಟ್ಟು (ಪೆರಿಫೆರಲ್ ಪ್ರದೇಶಗಳಲ್ಲಿ) ಪರಿಹಾರವನ್ನು ಭೂ ಮಾಲೀಕರಿಗೆ ನೀಡಬೇಕಿತ್ತು. ಇದೀಗ ಮೌಲ್ಯ ಕಡಿಮೆಗೊಳಿಸಿ ರುವುದರಿಂದ ಭೂಮಾಲೀಕರಿಗೆ ಒಂದು ಎಕರೆ ಕೃಷಿ ಭೂಮಿಗೆ ಕನಿಷ್ಠ ₹1 ಕೋಟಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

’ಪಿಆರ್‌ಆರ್‌ಗೆ ಹೊಂದಿಕೊಂಡಿರುವ ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು 2023ರ ಸೆಪ್ಟೆಂಬರ್‌ನಲ್ಲಿ ಪರಿಷ್ಕರಿಸಲಾಗಿತ್ತು. ಆದರೆ, ಯೋಜನೆ ಇನ್ನೂ ಆರಂಭವಾಗದ ಕಾರಣ ಹಳೇಯ ದರವನ್ನೇ ಉಳಿಸಿಕೊಂಡಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖರೀದಿ ಭರಾಟೆ: ಭೂಮಿಯ ಮಾರ್ಗದರ್ಶಿ ಮೌಲ್ಯ ಕಡಿಮೆಗೊಂಡರೆ ಭೂಮಿ ಖರೀದಿಯ ಭರಾಟೆ ಹೆಚ್ಚಾಗಲಿದೆ. ರೈತರಿಗೆ ನಷ್ಟವನ್ನು ಉಂಟು ಮಾಡಲಿದೆ. ಇದು ರೈತರ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT