ಬೆಂಗಳೂರು: ವಿವಿಧ ನೀರಾವರಿ ನಿಗಮಗಳು ಒಟ್ಟು ₹1,650 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೃಷ್ಣಾ ಭಾಗ್ಯ ಜಲನಿಗಮ ₹500 ಕೋಟಿ, ಕರ್ನಾಟಕ ನೀರಾವರಿ ನಿಗಮ ₹650 ಕೋಟಿ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳು ತಲಾ ₹250 ಕೋಟಿ ಸಾಲ ಪಡೆಯುವುದಕ್ಕಾಗಿ ಸರ್ಕಾರ ಖಾತರಿ ನೀಡಲಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ವಿವಿಧ ಸೇವೆಯಲ್ಲಿರುವ ಅಧಿಕಾರಿಗಳು ತಪ್ಪು ಮಾಡಿದಾಗ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಮುನ್ನ ಇಲ್ಲಿಯವರೆಗೆ ಕೆಪಿಎಸ್ಸಿಯ ಸಲಹೆ ಪಡೆಯಬೇಕಾಗಿತ್ತು. ಆ ನಿಯಮವನ್ನು ಕೈಬಿಟ್ಟಿದ್ದು, ಇನ್ನು ಮುಂದೆ ಸರ್ಕಾರವೇ ನೇರ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ನಿಯಮಕ್ಕೆ ಬದಲಾವಣೆ ತರಲಾಗಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು ಕೇಂದ್ರ ಸರ್ಕಾರ ₹500 ಕೋಟಿ ನೀಡಿದ್ದು, ರಾಜ್ಯ ಸರ್ಕಾರ ₹500 ಕೋಟಿ ಸೇರಿಸಿ ಒಟ್ಟು ₹1,000 ಕೋಟಿ ಬಳಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಕಟೀಲ್ ಇನ್ಮುಂದೆ ಪಟ್ಟಣ ಪಂಚಾಯಿತಿ: ದಕ್ಷಿಣಕನ್ನಡ ಜಿಲ್ಲೆಯ ಮನಬೆಟ್ಟು, ಕಿನ್ನಿಗೋಳಿ ಮತ್ತು ಕಟೀಲ್ ಗ್ರಾಮಪಂಚಾಯಿತಿಗಳನ್ನು ಸೇರಿಸಿ ಕಟೀಲ್ ಪಟ್ಟಣ ಪಂಚಾಯಿತಿ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.