ಬೆಂಗಳೂರು: ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆನಿರ್ವಹಣಾ ಕಾರ್ಯ ನಿಮಿತ್ತ ಶನಿವಾರ ರಾತ್ರಿ 9.30ರಿಂದ ಬೆಳಿಗ್ಗೆ 11ರವರೆಗೆ ಸ್ಥಗಿತಗೊಂಡಿದ್ದ ಮೆಟ್ರೊ ರೈಲು ಸಂಚಾರ, ಭಾನುವಾರ 11.25ರ ನಂತರ ಪುನರಾರಂಭಗೊಂಡಿತು.
ನಿಯಮಿತ ನಿರ್ವಹಣಾ ಕಾರ್ಯದ ಜೊತೆಗೆ, ಇಂದಿರಾ ನಗರ ಮೆಟ್ರೊ ನಿಲ್ದಾಣದಲ್ಲಿ ಹದಗೆಟ್ಟಿದ್ದ ಬೇರಿಂಗ್ ಕೂಡ ದುರಸ್ತಿ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದರು.
‘ಶನಿವಾರ ರಾತ್ರಿಯಿಡೀ ಸಿಬ್ಬಂದಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿದ್ದರು. ಭಾನುವಾರ ಬೆಳಿಗ್ಗೆಯೇ ಕೆಲಸ ಮುಕ್ತಾಯವಾಗಿತ್ತು. ಪರೀಕ್ಷಾರ್ಥವಾಗಿ ರೈಲು ಸಂಚಾರ ನಡೆಸಿದ ಮೇಲೆ, 11.25ಕ್ಕೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು’ ಎಂದು ಅವರು ಹೇಳಿದರು.