ಬೆಂಗಳೂರು:ನಮ್ಮ ಮೆಟ್ರೊದ ಬೆಳಿಗ್ಗೆಯ ಆರಂಭದ ರೈಲು ನಿಗದಿತ ಸಮಯಕ್ಕೆ ಸಂಚರಿಸದೆ ಇದ್ದುದರಿಂದ ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತು. ಕೊನೆಗೆ ಟಿಕೆಟ್ನ ಹಣ ವಾಪಸ್ ಪಡೆದು ಆಟೊ, ಬಸ್ ಹಿಡಿದು ಪ್ರಯಾಣ ಬೆಳೆಸಿದರು.
ಬುಧವಾರ ಬೆಳಿಗ್ಗೆ ಮೈಸೂರು ರಸ್ತೆಯ ಕೊನೆ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಹೊರಡಬೇಕಿದ್ದ ರೈಲು ವಿಜಯನಗರ ನಿಲ್ದಾಣಕ್ಕೆ 5.36ಕ್ಕೆ ಬಂದು ತಲುಪಬೇಕಿತ್ತು. ಆದರೆ, 10ರಿಂದ 12 ನಿಮಿಷ ತಡವಾದರೂ ಬರಲಿಲ್ಲ.
ರೈಲು ತಡವಾಗುತ್ತಿರವ ಬಗ್ಗೆ, ಎಷ್ಟೊತ್ತಿಗೆ ಬರುತ್ತದೆ ಎಂಬ ಬಗ್ಗೆ ಫ್ಲಾಟ್ಫಾರಂನಲ್ಲಿ ಸೂಚನಾ ಫಲಕದಲ್ಲಿಯಾಗಲಿ ಧ್ವನಿ ಮಾಧ್ಯಮದ ಮೂಲಕವಾಗಲಿ ಯಾವುದೇ ಸಂದೇಶವನ್ನು ಬಿತ್ತರಿಸಲಿಲ್ಲ.
ಈ ಬಗ್ಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕೇಳಿದರೆ ಅವರಿಗೂ ಮಾಹಿತಿ ಇರಲಿಲ್ಲ. ಎಲ್ಲಾ ಪ್ರಯಾಣಿಕರು ಕೇಳತೊಡಗಿದ ನಂತರ ಭದ್ರತಾ ಸಿಬ್ಬಂದಿ ಕೌಂಟರ್ಗೆ ಹೋಗಿ ಮಾಹಿತಿ ಪಡೆದು ಬಂದು, ರೈಲು ತಡವಾಗುತ್ತದೆ. ಎಷ್ಟೊತ್ತಿಗೆ ಬರುತ್ತದೆ ಎಂದು ಗೊತ್ತಿಲ್ಲ. ಎಲ್ಲರೂ ವಾಪಸ್ ಹೋಗಿ ಎಂದು ಹೇಳಿದರು.
ಕೌಂಟರ್ಗೆ ಬಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾ ಟಿಕೆಟ್ ವಾಪಸ್ ಕೊಟ್ಟು ಹಣ ಹಿಂಪಡೆದರು. ರೈಲು ತಡವಾಗುತ್ತಿರುವ ಬಗ್ಗೆ ಯಾವುದೇ ಸೂಚನೆಯನ್ನೂ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
‘ನಮಗೂ ಗೊತ್ತಿಲ್ಲ’
‘ರೈಲು ತಡವಾಗುತ್ತಿರುವ ಬಗ್ಗೆ ನಮಗೂ ಮಾಹಿತಿ ಇಲ್ಲ. ಈಗಷ್ಟೇ ಗೊತ್ತಾಗಿದೆ. ತಾಂತ್ರಿಕ ಸಮಸ್ಯೆ ಎಂದು ತಿಳಿಸಿದ್ದಾರೆ’ ಎಂದು ಕೌಂಟರ್ನಲ್ಲಿದ್ದ ಸಿಬ್ಬಂದಿ ಉತ್ತರಿಸಿದರು.
ಶತಾಬ್ದಿ ರೈಲು ಮಿಸ್ ಆದ್ರೆ ಹಣ ನೀವು ಕೊಡ್ತೀರಾ?
‘ನಾವು ಮೆಟ್ರೊ ಹತ್ತಿ, ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಇಳಿದು ಅಲ್ಲಿಂದ ಜನಶತಾಬ್ದಿ ರೈಲಿಗೆ ಹೋಗಬೇಕಿತ್ತು. ಈಗ ಇಲ್ಲಿಯೇ ತಡವಾಗಿದೆ. ನೀವು ಯಾವುದೇ ಸೂಚನೆ ನೀಡದೇ ಇದ್ದುದರಿಂದ ನಮಗೆ ಶತಾಬ್ದಿ ರೈಲು ತಪ್ಪುತ್ತದೆ. ಮುಂಗಡ ಬುಕ್ಕಿಂಗ್ ಮಾಡಿದ್ದ ಟಿಕೆಟ್ನ ಹಣ ನಷ್ಟವಾಗುತ್ತದೆ. ಆ ಹಣವನ್ನು ನೀವು ಕೊಡ್ತೀರಾ?’ ಎಂದು ಶತಾಬ್ದಿ ರೈಲು ಹಿಡಿದು ತೆರಳಬೇಕಿದ್ದ ಪ್ರಯಾಣಿಕರು ಮೆಟ್ರೊ ಸಿಬ್ಬಂದಿಯನ್ನು ಪ್ರಶ್ನಿಸಿದರು. ಬಳಿಕ, ಅವಸರ ಅವಸರವಾಗಿ ಆಟೊ ಹಿಡಿದು ರೈಲುನಿಲ್ದಾಣದತ್ತ ತೆರಳಿದರು.
ಉಳಿಂತೆ ಎಲ್ಲಾ ಪ್ರಯಾಣಿಕರು ಟಿಕೆಟ್ನ ಹಣ ವಾಪಸ್ ಪಡೆದು ಬಸ್, ಆಟೊ, ಬೈಕ್ಗಳಲ್ಲಿ ತೆರಳಿದರು.
ಎಚ್ಚೆತ್ತುಕೊಳ್ಳದ ಸಿಬ್ಬಂದಿ
ರೈಲು ತಡವಾಗುತ್ತಿರುವ ಬಗ್ಗೆ 10ರಿಂದ 12 ನಿಮಿಷ ತಡವಾದರೂ ಅಲ್ಲಿದ್ದ ಸಿಬ್ಬಂದಿ ಎಚ್ಚೆತ್ತುಕೊಳ್ಳದೇ ಇದ್ದುದು ವಿಪರ್ಯಾಸವೇ ಸರಿ. ರೈಲು ತಡವಾಗುವ ಕುರಿತು ಮೊದಲೇ ಸೂಚನೆ ನೀಡಿದ್ದರೆ ಪ್ರಯಾಣಿಕರಲ್ಲಿ ಉಂಟಾದ ಗೊಂದಲವನ್ನು ತಪ್ಪಿಸಬಹುದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.