ಬೆಂಗಳೂರು: ಮನೆ ಮುಂದೆ ಹಾಗೂ ರಸ್ತೆಯಲ್ಲಿ ಮಾತನಾಡುತ್ತ ನಿಂತಿರುತ್ತಿದ್ದ ವ್ಯಕ್ತಿಗಳ ಮೊಬೈಲ್ ಕಿತ್ತೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕಾಮಾಕ್ಷಿಪಾಳ್ಯ ವೃಷಭಾವತಿನಗರದ ಪ್ರಸನ್ನ (23) ಹಾಗೂ ಜಗದೀಶ್ (20) ಬಂಧಿತರು. ಅವರಿಂದ ₹ 5 ಲಕ್ಷ ಮೌಲ್ಯದ 15 ಮೊಬೈಲ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಆಟೊಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ರಾತ್ರಿ ವೇಳೆಯಲ್ಲಿ ಆಟೊದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಮನೆ ಮುಂದೆ ಹಾಗೂ ರಸ್ತೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತ ನಿಂತಿರುತ್ತಿದ್ದ ವ್ಯಕ್ತಿಗಳನ್ನು ಗುರುತಿಸುತ್ತಿದ್ದರು. ಆಟೊದಲ್ಲೇ ವ್ಯಕ್ತಿ ಬಳಿ ಹೋಗಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು’ ಎಂದೂ ತಿಳಿಸಿದರು.
‘ಜ. 31ರಂದು ವ್ಯಕ್ತಿಯೊಬ್ಬರ ಬಳಿಯಿದ್ದ ₹ 70 ಸಾವಿರ ಮೌಲ್ಯದ ಐಫೋನ್ನ್ನು ಆರೋಪಿಗಳು ಕಿತ್ತೊಯ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಹೇಳಿದರು.
‘ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಷ್ಟೆ ಅಲ್ಲದೇ, ಹಲವು ಠಾಣೆಗಳ ವ್ಯಾಪ್ತಿಗಳಲ್ಲೂ ಆರೋಪಿಗಳು ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಮೊಬೈಲ್ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದರು.