ಬೆಂಗಳೂರು: ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಫರಾನ್ (26) ಎಂಬುವರನ್ನು ಕೊಲೆ ಮಾಡಲಾಗಿದ್ದು, ಸ್ನೇಹಿತ ಯೂಸೂಫ್ (28) ಎಂಬಾತನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.
‘ಸ್ಥಳೀಯ ನಿವಾಸಿಗಳಾದ ಫರಾನ್ ಹಾಗೂ ಯೂಸೂಫ್, ಬಾಲ್ಯ ಸ್ನೇಹಿತರು. ಕೋಳಿ ಮಾಂಸ ಮಾರಾಟ ಅಂಗಡಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಅವರಿಬ್ಬರ ನಡುವೆ ಗಲಾಟೆ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಶುರುವಾಗಿತ್ತು. ಇದೇ ವೇಳೆ ಫರಾನ್, ಅವಾಚ್ಯ ಶಬ್ದಗಳಿಂದ ಯೂಸೂಫ್ ತಾಯಿಯನ್ನು ನಿಂದಿಸಿದ್ದರು. ಕೋಪಗೊಂಡ ಯೂಸೂಫ್, ಮಾಂಸ ಕತ್ತರಿಸಲು ಬಳಸುವ ಚೂರಿಯಿಂದ ಫರಾನ್ಗೆ ಇರಿದಿದ್ದರು.’
‘ತೀವ್ರ ಗಾಯಗೊಂಡು ರಕ್ತಸ್ರಾವದಿಂದಾಗಿ ಫರಾನ್ ಮೃತಪಟ್ಟಿದ್ದಾರೆ. ಆರೋಪಿ ಯೂಸೂಫ್ ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.