ಬೆಂಗಳೂರು: ಮೆಟ್ರೊ ಕಾಮಗಾರಿಯಿಂದಾಗಿ ಕೆಪಿಟಿಸಿಎಲ್ಗೆ ₹ 6 ಲಕ್ಷದಿಂದ ₹ 7 ಲಕ್ಷ ನಷ್ಟವಾಗಿರುವ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾಮಗಾರಿ ಕೈಗೊಂಡಿರುವ ‘ಐಟಿಡಿ ಸಿಮಿಂಡ’ ಕಂಪನಿಯು ಜೆಸಿಬಿ ಯಂತ್ರದ ಮೂಲಕ ನೆಲ ಅಗೆಯುವಾಗ ವಿದ್ಯುತ್ ಕೇಬಲ್ ಹಾಳು ಮಾಡಿದೆ’ ಎಂದು ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಬಿ.ಎನ್. ಸಂಪತ್ಕುಮಾರ್ ದೂರು ನೀಡಿದ್ದಾರೆ. ಕಂಪನಿಯ ಯೋಜನಾ ವ್ಯವಸ್ಥಾಪಕ ಪರಾಗ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಳಕೆದಾರರಿಗೆ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ 220 ಕೆ.ವಿ ಹೂಡಿ ಸ್ಟೇಷನ್ನಿಂದ 66 ಕೆ.ವಿ ವಿದ್ಯುತ್ ಕೇಬಲ್ ಅನ್ನು ನೆಲದಡಿ ಹಾಕಲಾಗಿದೆ. ಇದೇ ಮೇ 21ರಂದು ರಾಧಾ ಹೋಟೆಲ್ ಬಳಿ ಇಪಿಐಪಿ ಸ್ಟೇಷನ್ ಹತ್ತಿರ ಮೆಟ್ರೊ ಕಾಮಗಾರಿ ಮಾಡುತ್ತಿದ್ದ ವೇಳೆ ಕೇಬಲ್ ಹಾಳು ಮಾಡಲಾಗಿದೆ’ ಎಂದು ಸಂಪತ್ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
‘ಕೇಬಲ್ ಹಾಳಾಗಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ, ಜನರಿಗೂ ತೊಂದರೆ ಆಗಿತ್ತು. ಕೆಪಿಟಿಸಿಎಲ್ಗೂ ನಷ್ಟವಾಗಿತ್ತು. ಅದನ್ನು ಭರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕಂಪನಿಯು ಪ್ರತಿಕ್ರಿಯಿಸಿಲ್ಲ’ ಎಂದು ಹೇಳಿದ್ದಾರೆ.