ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿನಗರ ಚಾಂದಿನಿ ಚೌಕ್‌ಗೆ ಹೊಸ ರೂಪ

Last Updated 17 ಮಾರ್ಚ್ 2023, 22:17 IST
ಅಕ್ಷರ ಗಾತ್ರ

ಬೆಂಗಳೂರು: ಕಸ ಸುರಿಯುವ ತಾಣವಾಗಿದ್ದ ಶಿವಾಜಿನಗರದ ಚಾಂದಿನಿ ಚೌಕ್‌ಗೆ ಈಗ ಹೊಸ ರೂಪ ಬಂದಿದ್ದು, ಜನ ಸಮುದಾಯ ಸೇರುವ ತಾಣವಾಗಿ ಮಾರ್ಪಟ್ಟಿದೆ.

ರಸೆಲ್ ಮಾರುಕಟ್ಟೆ ಎದುರಿನ ಜಾಗಕ್ಕೆ 300 ವರ್ಷಗಳ ಇತಿಹಾಸವಿದ್ದು, 100 ವರ್ಷಗಳಷ್ಟು ಮಾರುಕಟ್ಟೆ, 200 ವರ್ಷಗಳಷ್ಟು ಹಳೆಯದಾದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್, 250 ವರ್ಷಗಳ ಹಿಂದಿನ ಬಾವಿ ಕಸದಿಂದ ತುಂಬಿಹೋಗಿತ್ತು. ಜನ ಮೂಗು ಮುಚ್ಚಿ ಓಡಾಡಬೇಕಾದ ಸ್ಥಿತಿ ಇತ್ತು.

ಈ ಜಾಗವೀಗ ಗುರುತು ಸಿಗದಷ್ಟು ಬದಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಬಿಬಿಎಂಪಿ ಅನುದಾನದಡಿ ₹7 ಕೋಟಿ ಖರ್ಚು ಮಾಡಲಾಗಿದ್ದು, ಹೊಸತನದೊಂದಿಗೆ ಜನರ ಮನಸೂರೆಗೊಳ್ಳುವ ತಾಣವಾಗಿ ಬದಲಾಗಿದೆ.

120 ಮೀಟರ್‌ ಉದ್ದ ಮತ್ತು 13 ಮೀಟರ್ ಅಗಲದ ಜಾಗದಲ್ಲಿ 8 ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಎದುರಿನ ಮೊದಲ ಪ್ಲಾಜಾದಲ್ಲಿ ಎರಡು ಕಾರಂಜಿಗಳನ್ನು ನಿರ್ಮಿಸಲಾಗಿದೆ.

ಅಲ್ಲಲ್ಲಿ ಕಾರಂಜಿಗಳು, ಆಸನ ವ್ಯವಸ್ಥೆಗಳು, ಶೌಚಾಲಯಗಳು, ವಾಹನ ನಿಲುಗಡೆ ತಾಣ, ಪೊಲೀಸ್ ಚೌಕಿ ನಿರ್ಮಾಣವಾಗಿವೆ. ಆಲಂಕಾರಿಕ ವಿದ್ಯುತ್ ದೀಪಗಳೊಂದಿಗೆ ಚಾಂದಿನಿ ಚೌಕ್‌ ಕಂಗೊಳಿಸುತ್ತಿದೆ. 35 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಗೂ ಒತ್ತು ನೀಡಲಾಗಿದೆ. ಮತ್ತೊಂದು ಬದಿಯಲ್ಲಿ 50 ಅಡಿ ಎತ್ತಡದ ಗಡಿಯಾರ ಗೋಪುರ ತಲೆ ಎತ್ತಿ ನಿಂತಿದೆ.

250 ವರ್ಷಕ್ಕೂ ಹಳೆಯದಾದ ಬಾವಿಯೊಂದಿದ್ದು, ಅದರ ಸುತ್ತಲೂ ಕುಳಿತು ಕಾಲ ಕಳೆಯಲು ಜಾಗ ಸೃಷ್ಟಿಸಲಾಗಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದರೂ ಯಾವುದೇ ಅವಘಡ ಆಗದಂತೆ ಎರಡು ಅಡಿ ಆಳದಲ್ಲಿ ಗ್ರಿಲ್‌ಗಳನ್ನು ಅಳವಡಿಸಲಾಗಿದೆ.

‘ಶಿವಾಜಿನಗರದ ಕೇಂದ್ರ ಸ್ಥಾನ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದಾಗಿತ್ತು. ಐತಿಹಾಸಕ ತಾಣಕ್ಕೆ ವಿಶೇಷ ರೂಪ ನೀಡಲಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ. ಮಳೆ ನೀರು ರಸ್ತೆ, ಅಂಗಡಿಗಳಿಗೆ ಹರಿಯುವುದನ್ನು ತಪ್ಪಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ’ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.

ಇನ್ನೂ ಮುರ್ನಾಲ್ಕು ದಿನಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದರು.

‘ನವೀಕರಣಗೊಂಡಿರುವ ಚಾಂದಿನಿ ಚೌಕ್‌ನಲ್ಲಿ ಶಿವಾಜಿನಗರ ಹಬ್ಬವನ್ನು ಶನಿವಾರ ಆಚರಣೆ ಮಾಡಲಾಗುತ್ತಿದೆ. ನಗರದ ವೈವಿಧ್ಯ ಸಂಭ್ರಮಿಸುವ ಮತ್ತು ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬ ಇದಾಗಿದೆ. ಪ್ರಸಿದ್ಧ ಕಲಾವಿದರಿಂದ ಕಲಾ ಪ್ರದರ್ಶನ, ಇತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ’ ಎಂದು ವಿವರಿಸಿದರು.

ರಸೆಲ್ ಮಾರುಕಟ್ಟೆಗೂ ಬಣ್ಣ
ರಸೆಲ್ ಮಾರುಕಟ್ಟೆಗೆ ಬಣ್ಣ ಬಳಿಯಲಾಗಿದ್ದು, ಹೊರಾಂಗಣ ಕಂಗೊಳಿಸುತ್ತಿದೆ.

‘ಸಂಪೂರ್ಣವಾಗಿ ಮಾರುಕಟ್ಟೆ ನವೀಕರಣಕ್ಕೆ ನೀಡಿದ್ದ ₹16 ಕೋಟಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತು. ಹೊರಾಂಗಣಕ್ಕೆ ಬಣ್ಣ ಬಳಿದು ಸಣ್ಣಪುಟ್ಟ ರಿಪೇರಿ ಮಾಡಿಸಲಾಗಿದೆ. ಮುಂದಿನ ವರ್ಷ ರಸೆಲ್ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸಲಾಗುವುದು’ ಎಂದು ರಿಜ್ವಾನ್ ಅರ್ಷದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT