ಬೆಂಗಳೂರು: ‘ಒಮಾನ್ ಕನ್ನಡಿಗರ ಸಂಘದ ವತಿಯಿಂದ 16ನೇ ವಿಶ್ವಕನ್ನಡ ಸಮ್ಮೇಳನವನ್ನು ಏಪ್ರಿಲ್3 ಮತ್ತು 4ರಂದು ಮಸ್ಕತ್ನಲ್ಲಿರುವ ಅಲ್–ಫಲಾಜ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷಸತೀಶ್ ನಂಬಿಯಾರ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಒಮಾನ್ನಲ್ಲಿ 10 ಸಾವಿರಕ್ಕೂ ಅಧಿಕ ಕನ್ನಡಿಗರಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಕಲೆ ಅನಾವರಣಕ್ಕೆ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಮಂಜುನಾಥ ಸಾಗರ್, ‘ವಿವಿಧ ಕ್ಷೇತ್ರಗಳ 16 ಸಾಧಕರನ್ನು ಗುರುತಿಸಿ ‘ವಿಶ್ವಮಾನ್ಯ ಪ್ರಶಸ್ತಿ’ ನೀಡಲಾಗುವುದು. ಸಮ್ಮೇಳನದ ಅಂಗವಾಗಿ ವಿಶೇಷ ಸಂಚಿಕೆ ಹೊರತರಲಿದ್ದು, ಆಸಕ್ತರು ತಮ್ಮ ಲೇಖನಗಳನ್ನು hrudayavahini@rediffmail.comಗೆ ಕಳುಹಿಸಬಹುದು’ ಎಂದರು.
‘ಸಮ್ಮೇಳನವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, 4ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಭಾಗವಹಿಸಲಿದ್ದಾರೆ’ ಎಂದರು.