ಬೆಂಗಳೂರು: ‘ಮಹಾರಾಷ್ಟ್ರದ ನಾಸಿಕ್, ಪುಣೆ ಹಾಗೂ ಕೇರಳದಲ್ಲಿ ಕೃಷಿ ಪ್ರವಾಸೋದ್ಯಮ (ಅಗ್ರಿ ಟೂರಿಸಂ) ಪ್ರಯೋಗ ಯಶಸ್ವಿಯಾಗಿದೆ. ಲಾಕ್ಡೌನ್ ಮುಗಿದ ನಂತರ ರಾಜ್ಯದಲ್ಲೂ ಪರಿಪೂರ್ಣ ಸಿದ್ಧತೆ ಮಾಡಿಕೊಂಡು ಅದನ್ನು ಜಾರಿಗೊಳಿಸುವ ಚಿಂತನೆ ಇದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಶುಕ್ರವಾರ ಇಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕನಿಷ್ಠ ಎರಡು ಕಡೆ ಪ್ರಾಯೋಗಿಕವಾಗಿ ಅಗ್ರಿ ಟೂರಿಸಂ ಜಾರಿಗೊಳಿಸಲಾಗುತ್ತದೆ. ನಗರವಾಸಿಗಳಿಗೆ ಕೃಷಿ ಸಂಸ್ಕೃತಿ ಹಾಗೂ ಗ್ರಾಮೀಣ ಸಂಸ್ಕೃತಿ ಪರಿಚಯಿಸುವುದು ಇದರ ಪ್ರಮುಖ ಉದ್ದೇಶ. ಎತ್ತಿನಗಾಡಿ ಪ್ರಯಾಣ, ನಾಟಿ ಮಾಡುವುದು, ದನಕರುಗಳ ಮೈತೊಳೆಯುವುದು, ಚಿನ್ನಿದಾಂಡು, ಗೋಲಿ, ಲಗೋರಿ ಆಟ ಮೊದಲಾದವುಗಳನ್ನು ಇದು ಒಳಗೊಂಡಿರುತ್ತದೆ’ ಎಂದರು.
‘ಲಾಕ್ಡೌನ್ ಮುಗಿದ ನಂತರ ನಗರ ಪ್ರದೇಶಗಳ ಶಾಲಾ ಮಕ್ಕಳನ್ನು ಕೃಷಿ ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ರೂಪರೇಷೆ ಸಿದ್ದಪಡಿಸಲಾಗುತ್ತದೆ’ ಎಂದು ಬಿ.ಸಿ.ಪಾಟೀಲ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.