ಬೆಂಗಳೂರು:‘ದೆಹಲಿಯಲ್ಲಿರೈತರ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ತೆರವು ಮಾಡಿದ್ದು, ಪೊಲೀಸರ ಮೇಲೆ ದಾಳಿ ಮಾಡಿದ್ದು ರಾಷ್ಟ್ರ ವಿರೋಧಿ ಕೆಲಸಗಳು. ಯಾರೇ ಆಗಲಿ ಹಿಂಸಾಚಾರ ಮಾಡಬಾರದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಗವಾರ ರಸ್ತೆಯಲ್ಲಿರುವ ಗೋವಿಂದಪುರ ಠಾಣೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಗೋವಿಂದಪುರ ಠಾಣೆ ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಠಾಣೆಗಾಗಿ ನಾಗರಿಕ ನಿವೇಶನ (ಸಿಎ) ನೀಡುವಂತೆ ಬಿಡಿಎಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಿವೇಶನ ಸಿಕ್ಕ ನಂತರ, ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲು ಇಡಲಾಗುವುದು’ ಎಂದರು.
‘ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿದ್ದ ಗೋವಿಂದಪುರದಲ್ಲಿ ಜನಸಂಖ್ಯೆ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹೊಸ ಠಾಣೆ ತೆರೆಯಲು ತೀರ್ಮಾನಿಸಲಾಗಿತ್ತು. ಅದರಂತೆ ಹೊಸ ಠಾಣೆ ಸಿದ್ಧಗೊಂಡಿದೆ. ಠಾಣೆಗೆ ಶೀಘ್ರವೇ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.
ಶಾಸಕ ಕೆ.ಜೆ.ಜಾರ್ಜ್,‘ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ, ಗಲಭೆಯಲ್ಲಿ ಪಾತ್ರವೇ ಇಲ್ಲದ ಅಮಾಯಕರನ್ನು ಬಂಧಿಸಲಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.