ಬೆಂಗಳೂರು: ಸಿಗರೇಟ್ ಮತ್ತು ಮಾಸ್ಕ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಸಿಬಿಯ ಎಸಿಪಿ ಪ್ರಭುಶಂಕರ್ ಶುಕ್ರವಾರ ಮಧ್ಯಾಹ್ನ ಇಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖಾಧಿಕಾರಿ ಮುಂದೆ ಹಾಜರಾದರು.
ಲೋಕಾಯುಕ್ತ ಕೋರ್ಟ್ನಿಂದ ಗುರುವಾರ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಪ್ರಭುಶಂಕರ್ ಎಸಿಬಿ ಕಚೇರಿಗೆ ಬಂದರು. ಆದರೆ, ಅನಾರೋಗ್ಯ ಕಾರಣ ನೀಡಿ ಬೇಗನೆ ನಿರ್ಗಮಿಸಿದರು. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಯಾರಿಂದಲೂ ತಾವು ಲಂಚ ಪಡೆದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಶನಿವಾರ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಪ್ರಭುಶಂಕರ್ ಮನೆಯಲ್ಲಿ ಸಿಕ್ಕಿರುವ ಡೈರಿ ಹಾಗೂ ಅದರಲ್ಲಿರುವ ಆಸ್ತಿಪಾಸ್ತಿ ಪ್ರಸ್ತಾಪ ಕುರಿತು ಇನ್ನಷ್ಟೇ ಪ್ರಶ್ನಿಸಬೇಕಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಇದೇ ಪ್ರಕರಣದ ಆರೋಪಿಗಳಾಗಿರುವ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಅಜಯ್ ಮತ್ತು ನಿರಂಜನ ಕುಮಾರ್ ಇನ್ನೂ ಪತ್ತೆ ಇಲ್ಲ. ಹಣ ವರ್ಗಾವಣೆಯಲ್ಲಿ ಮಧ್ಯವರ್ತಿಗಳಾಗಿರುವ ಭೂಷಣ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಅವರೂ ವಿಚಾರಣೆಗೆ ಹಾಜರಾಗಿಲ್ಲ.
ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ಕಳೆದ ಶುಕ್ರವಾರ ಮೂವರ ಮನೆಗಳ ಮೇಲೂ ದಾಳಿ ನಡೆದಿತ್ತು.ಸಿಗರೇಟ್ ವಿತರಕರಾದ ಎಂ.ಡಿ ಆ್ಯಂಡ್ ಸನ್ಸ್ ಮತ್ತು ಮಹಾವೀರ್ ಟ್ರೇಡರ್ಸ್ ಮತ್ತಿತರ ಕಂಪನಿಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹ 85 ಲಕ್ಷ ಲಂಚ ಪಡೆದ ಆರೋಪ ಅಧಿಕಾರಿಗಳ ಮೇಲಿದೆ.
ಇಲ್ಲದೆ, ಎನ್– 95 ನಕಲಿ ಮಾಸ್ಕ್ ತಯಾರಿಸಿ ಸಿಕ್ಕಬಿದ್ದ ಆರೋಪಿಯನ್ನು ರಕ್ಷಿಸಲು ₹ 15 ಲಕ್ಷ ಲಂಚ ಪಡೆದ ಆರೋಪವೂ ಇವರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.