ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ತೀವ್ರ ಜ್ವರದಿಂದಾಗಿ ನರಳುತ್ತ ಮಲಗಿದ್ದ ಮಹಿಳೆಯೊಬ್ಬರನ್ನು ರೈಲ್ವೆ ಇಲಾಖೆ ಸಿಬ್ಬಂದಿ ರಕ್ಷಿಸಿ, ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆ ಹೆಸರು ಗೊತ್ತಾಗಿಲ್ಲ. ಎರಡು ದಿನಗಳಿಂದ ಮಹಿಳೆ ನಿಲ್ದಾಣದಲ್ಲಿ ಮಲಗಿದ್ದಾರೆ. ಶನಿವಾರ ಅವರನ್ನು ನೋಡಿದ್ದ ಸಿಬ್ಬಂದಿ, ಸಹಾಯಕ್ಕೆ ಹೋಗಿದ್ದರು. ಆದರೆ, ಅವರಿಗೆ ತೀವ್ರ ಜ್ವರವಿರುವುದು ಗೊತ್ತಾಗಿತ್ತು.
ಕೊರೊನಾ ಸೋಂಕು ತಗುಲಿರುವ ಅನುಮಾನ ಬಂದಿದ್ದರಿಂದಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಹಿಳೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
‘ಯಾರೋ ಮಹಿಳೆಯನ್ನು ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾರೆ. ಅವರ ವಿಳಾಸವನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಸಿಬ್ಬಂದಿ ಹೇಳಿದರು.