ಬೆಂಗಳೂರು: ‘ಕಸದ ರಾಶಿಯಲ್ಲಿ ಸಿಕ್ಕ ಮಗುವನ್ನು ರಕ್ಷಿಸಿ ಹಾಲೂಡಿಸಿದ ವೈಟ್ಫೀಲ್ಡ್ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಅರ್ಚನಾ ಅವರಿಗೆ ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದು ಮೇಯರ್ ಆರ್.ಸಂಪತ್ರಾಜ್ ಹೇಳಿದರು.
ಬಿಬಿಎಂಪಿ ಕಚೇರಿಯಲ್ಲಿ ಅರ್ಚನಾ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ‘ಮಗುವನ್ನು ರಕ್ಷಿಸುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿದಿದ್ದಾರೆ. ಅವರ ಸೇವೆ ಗುರುತಿಸಲು ಪ್ರಥಮ ಆದ್ಯತೆ ಮೇಲೆ ಪ್ರಶಸ್ತಿ ನೀಡಲಾಗುವುದು’ ಎಂದರು.
ಅರ್ಚನಾ ಮಾತನಾಡಿ, ‘ಕಸದ ರಾಶಿಯಲ್ಲಿದ್ದ ಮಗುವನ್ನು ನೋಡಿ ಮನಸ್ಸು ತಡೆಯದೇ ರಕ್ಷಿಸಲು ಮುಂದಾದೆ. ಆದರೆ, ಮಗು ಮೃತಪಟ್ಟಿದ್ದು ದುಃಖ ತಂದಿದೆ’ ಎಂದು ಹೇಳಿದರು.
ಅರ್ಚನಾಗೆ ಮೇಯರ್ ವೈಯಕ್ತಿಕವಾಗಿ ₹10 ಸಾವಿರ ಹಾಗೂ ಪಾಲಿಕೆ ವತಿಯಿಂದ ಪದಕ ನೀಡಿ ಗೌರವಿಸಿದರು.