ಬೆಂಗಳೂರು: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಮಾಲೀಕರ ಕೈ ಕಾಲು ಕಟ್ಟಿ ಹಾಕಿ ಸುಲಿಗೆ ಮಾಡಿದ್ದ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಪಟ್ಟೇಗಾರಪಾಳ್ಯದ ನಿವಾಸಿ ಜಿಯಾವುಲ್ಲಾ (36), ನಂದನ್ (27), ಶರತ್ (28) ಬಂಧಿತರು. ಇವರಿಂದ ₹ 1.50 ಲಕ್ಷ ಮೌಲ್ಯದ ಚಿನ್ನದ ಸರ, ಒಲೆ, 2 ದ್ವಿಚಕ್ರ ವಾಹನ, ಮಚ್ಚು, ಅಂಟಿನ ಪಟ್ಟಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಂಧಿತರು ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದರು. ತಂಡ ಕಟ್ಟಿಕೊಂಡು ಕಳ್ಳತನ, ದ್ವಿಚಕ್ರ ವಾಹನ ಕಳವು, ಗಾಂಜಾ ಮಾರಾಟ ಹಾಗೂ ಸುಲಿಗೆ ಮಾಡುತ್ತಿದ್ದರು’ ಎಂದರು.
ಫಲಕ ನೋಡಿ ಕೃತ್ಯ: ‘ನಂದಿನಿ ಲೇಔಟ್ ನಿವಾಸಿಯಾದ ದೂರುದಾರ ಮಹಿಳೆ, 2ನೇ ಮಹಡಿಯ ಮನೆ ಖಾಲಿ ಇರುವ ಕುರಿತು ‘ಮನೆ ಬಾಡಿಗೆಗೆ ಇದೆ’ ಎಂಬ ಫಲಕ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.
‘ಫಲಕ ನೋಡಿದ್ದ ಆರೋಪಿಗಳು, ಮಾಹಿತಿ ಕಲೆಹಾಕಿ ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ತಿಳಿದುಕೊಂಡಿದ್ದರು. ಬಾಡಿಗೆಗೆ ಕೇಳುವ ನೆಪದಲ್ಲಿ ಮೇ 9ರಂದು ಹೋಗಿದ್ದರು. ಕೀ ಪಡೆದಿದ್ದ ಆರೋಪಿಗಳು ಕೆಲ ಹೊತ್ತಿನ ನಂತರ ‘ಮನೆ ಗಲೀಜಾಗಿದೆ. ಬಂದು ನೋಡಿ’ ಎಂದಿದ್ದ. ಆತನ ಮಾತು ನಂಬಿದ್ದ ಮಹಿಳೆ, ಮನೆಯೊಳಗೆ ತೆರಳಿದಾಗ ಕೈಕಾಲು ಕಟ್ಟಿ ಕೃತ್ಯ ಸುಲಿಗೆಮಾಡಿದ್ದರು’ ಎಂದೂ ಪೊಲೀಸರು ತಿಳಿಸಿದರು.