ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಹರಿದು ಹಂಚಿಹೋಗಿರುವ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಬುಧವಾರ ಇಲ್ಲಿ ಮೀಸಲಾತಿ ಪ್ರಮಾಣ ನಿರ್ಧರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಆಯೋಗಕ್ಕೆಅಲೆಮಾರಿ ಸಮುದಾಯದ ಎ.ಆರ್.ಗೋವಿಂದಸ್ವಾಮಿ, ಆದರ್ಶ ಯಲ್ಲಾಪುರ, ಸುಗುಣಾ, ಕಿರಣ್ ಕುಮಾರ್ ಅವರು ಮನವಿ ಸಲ್ಲಿಸಿದರು.
ನ್ಯಾಯದ ಭರವಸೆ: ಅಲೆಮಾರಿ ಸಮುದಾಯಕ್ಕೆ ಖಂಡಿತ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ, ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತಿದ್ದು, ಎಲ್ಲ ವರದಿಗಳು, ಮನವಿಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಸಲಹೆ ನೀಡುವುದಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ಭರವಸೆ ನೀಡಿದರು.
‘ಅಲೆಮಾರಿಗಳು ಒಂದು ರೀತಿಯ ಅನಿಕೇತನ ಇದ್ದಂತೆ. ಅವರಿಗೆ ಒಂದು ನಿಗಮ ಮಂಡಳಿ ಸ್ಥಾಪಿಸಬೇಕು’ ಎಂದು ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಪ್ರತ್ಯೇಕ ಅಭಿವೃದ್ಧಿ ಸ್ಥಾಪಿಸಬೇಕು ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಆಗ್ರಹಿಸಿದರೆ, ಈ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ಮೀಸಲಾತಿ ಹಂಚಿಕೆಯಾಗಬೇಕು ಎಂದು ಹಿರಿಯ ಮುಖಂಡ ಡಿ.ವೀರಯ್ಯ ಒತ್ತಾಯಿಸಿದರು.
ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ಕೋಷದ ನೋಡಲ್ ಅಧಿಕಾರಿ ಡಾ. ಬಾಲಗುರುಮೂರ್ತಿ ಇದ್ದರು.