ಬೆಂಗಳೂರು: ‘ಜ್ಞಾನವಿದ್ದಲ್ಲಿ ಸಂಪತ್ತು ನೆಲೆಸಿರುತ್ತದೆ. ಜ್ಞಾನ ಯಜ್ಞದಲ್ಲಿ ಶಿಕ್ಷಕರು ವಿದ್ಯೆಯನ್ನು ದಾನ ಮಾಡುತ್ತಾರೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.
ರೋಟರಿ ಬೆಂಗಳೂರು ಜಂಕ್ಷನ್, ರೋಟರಿ ಬೆಂಗಳೂರು ಹಲಸೂರು, ರೋಟರಿ ಬೆಂಗಳೂರು ಬಸವನಗುಡಿ,‘ಪ್ರಜಾವಾಣಿ’ ಪ್ರಾಯೋಜಕತ್ವದಲ್ಲಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3190 ಭಾನುವಾರ ಆನ್ಲೈನ್ ಮೂಲಕ ಆಯೋಜಿಸಿದ್ದ ‘ಗುರುದಕ್ಷಿಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜ್ಞಾನವನ್ನು ಉಚಿತವಾಗಿ ಪಸರಿಸುವ ಏಕೈಕ ಕ್ಷೇತ್ರ ಶಿಕ್ಷಣ. ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸಿದರು. ಭೌತಿಕ ತರಗತಿಗಳಿಗೆ ಅವಕಾಶವಿಲ್ಲವೆಂದು ಸುಮ್ಮನಾಗಲಿಲ್ಲ. ಹೋದ ವರ್ಷದ ಏಪ್ರಿಲ್ನಿಂದ ಆನ್ಲೈನ್ ತರಗತಿಗಳನ್ನು ಹಮ್ಮಿಕೊಂಡು ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದರು. ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು’ ಎಂದರು.
ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3190 ಜಿಲ್ಲಾ ಗವರ್ನರ್ ಬಿ.ಎಲ್.ನಾಗೇಂದ್ರ ಪ್ರಸಾದ್ ‘ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು. ರಾಜ್ಯದಲ್ಲಿ ಐದು ರೋಟರಿ ಡಿಸ್ಟ್ರಿಕ್ಟ್ ಇವೆ. ಎಲ್ಲಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ತೆರೆಮರೆಯಲ್ಲಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸಿರುವುದು ಖುಷಿಯ ವಿಚಾರ. ಆ ಕೆಲಸ ನಮ್ಮಿಂದ ಆಗಿದೆ. ಈ ಕಾರ್ಯಕ್ಕೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಕೂಡ ಕೈಜೋಡಿಸಿವೆ. ಈ ಪತ್ರಿಕೆಗಳು ಅಗತ್ಯ ಸಲಹೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿವೆ’ ಎಂದು ತಿಳಿಸಿದರು.
‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರು: ಗುರುರಾಜ ಕರಜಗಿ (ಶಿಕ್ಷಣ ತಜ್ಞ), ಅಶೋಕ್ ಕಾಮತ್ (ಮುಖ್ಯಸ್ಥರು, ಅಕ್ಷರ ಫೌಂಡೇಷನ್), ಮಾಯಾ ಮೆನನ್ (ಸಂಸ್ಥಾಪಕ ನಿರ್ದೇಶಕಿ, ದಿ ಟೀಚರ್ ಫೌಂಡೇಷನ್), ಜಿ.ಕೆ.ವಿಶ್ವನಾಥ್ (ಮ್ಯಾಚ್ ಪಾಯಿಂಟ್ ಟೇಬಲ್ ಟೆನಿಸ್ ಅಕಾಡೆಮಿಯ ಸಂಸ್ಥಾಪಕ), ಜೋತ್ಸ್ನಾ ಬಾಪಟ್ (ಡೀನ್, ಐಐಐಟಿ ಬೆಂಗಳೂರು).
**
ಸಾಮಾಜಿಕ ಹೊಣೆಗಾರಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅವರು ಅಡ್ಡದಾರಿ ಹಿಡಿಯುವುದಿಲ್ಲ. ಆ ಕೆಲಸವನ್ನು ನಾವೆಲ್ಲ ಮಾಡಬೇಕು.
-ಗೀತಾ ಸಿಂಧೆ, ಪ್ರಶಸ್ತಿ ಪುರಸ್ಕೃತರು
**
ಈ ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗಿದೆ. ಜೊತೆಗೆ ಸಂತಸವೂ ನೀಡಿದೆ.
-ರಾಮಚಂದ್ರ ಭಟ್, ಪ್ರಶಸ್ತಿ ಪುರಸ್ಕೃತರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.