ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಯಲಹಂಕದ ಮಾರಮ್ಮ ದೇವಸ್ಥಾನ ಬಳಿಯ ನಿವಾಸಿಗಳ ಮನೆಗೆ ನುಗ್ಗಿ ಆರೋಪಿಗಳು ಪುಂಡಾಟಿಕೆ ನಡೆಸಿದ್ದರು. ಇಲ್ಲಿನ ವಿಜಯ್, ಯೋಗೇಶ್ ಮತ್ತು ನವೀನ್ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.
ರೌಡಿಶೀಟರ್ ಲಕ್ಷ್ಮಣ, ಭರತ್ ಮತ್ತು ಅವರ ಸಹಚರರು ಮಾರುತಿನಗರದಲ್ಲಿ ಕ್ಯಾಟ್ ಮಂಜನ ಕಾರನ್ನು ಅಡ್ಡಗಟ್ಟಿ ಇತ್ತೀಚೆಗೆ ಗಲಾಟೆ ಮಾಡಿದ್ದರು. ಈ ವಿಷಯಕ್ಕೆ ದ್ವೇಷ ಹೊಂದಿದ್ದ ಕ್ಯಾಟ್ ಮಂಜ, ತನ್ನ ಸಹಚರರ ಜತೆಗೂಡಿ ಲಕ್ಷ್ಮಣ ಮತ್ತು ಭರತನ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಶನಿವಾರ ಸಂಜೆ ಕಂಠಪೂರ್ತಿ ಕುಡಿದು ಮಾರಕಾಸ್ತ್ರಗಳೊಂದಿಗೆ ಲಕ್ಷ್ಮಣ ನೆಲೆಸಿದ್ದ ಮಾರಮ್ಮ ದೇವಸ್ಥಾನದ ನೀರಿನ ಟ್ಯಾಂಕ್ ಬಳಿಗೆ ಕ್ಯಾಟ್ ಮಂಜ ಮತ್ತು ಆತನ ಸಹಚರರು ಹೋಗಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಲಕ್ಷ್ಮಣ ಮತ್ತು ಆತನ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿತ್ತು. ಇದರಿಂದ ಕೋಪಗೊಂಡ ಕ್ಯಾಟ್ ಮಂಜ ಮತ್ತು ಆತನ ಸಹಚರರು ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೆ, ಮನೆಯ ಮುಂದೆ ನಿಲ್ಲಿಸಿದ್ದ ಏಳು ಕಾರು ಹಾಗೂ ಬೈಕ್ಗಳನ್ನು ಹಾನಿಗೊಳಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.