ಬೆಂಗಳೂರು: ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಸತ್ತಂತೆ ಬಿಂಬಿಸಿ ದಾಖಲೆಗಳನ್ನು ಸೃಷ್ಟಿಸಿ ತಲೆಮರೆಸಿಕೊಂಡಿದ್ದ ರೌಡಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿಯನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
‘ಎರಡು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿ ಹೆಸರು ವೈಟ್ಫೀಲ್ಡ್ ಠಾಣೆಯ ರೌಡಿ ಪಟ್ಟಿಯಲ್ಲಿತ್ತು. ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಲಭ್ಯವಾದ ಸುಳಿವು ಆಧರಿಸಿ ಈತನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಮಲ್ಲಿ, ವಿಚಾರಣೆಗೆ ಗೈರಾಗುತ್ತಿದ್ದ. ಈತನ ಬಂಧನಕ್ಕೆ ಪೊಲೀಸರು ಶೋಧ ಆರಂಭಿಸಿದ್ದರು. ‘ಮಲ್ಲಿ ಸತ್ತಿದ್ದಾನೆ’ ಎಂಬುದಾಗಿ ಕುಟುಂಬಸ್ಥರು ಹೇಳಲಾರಂಭಿಸಿದ್ದರು. ಮರಣದ ದಾಖಲೆಗಳನ್ನು ತೋರಿಸುತ್ತಿದ್ದರು. ಸ್ನೇಹಿತರು ಹಾಗೂ ಸಂಬಂಧಿಕರು, ಮಲ್ಲಿ ಸತ್ತಿರುವುದಾಗಿ ಸುದ್ದಿ ಹಬ್ಬಿಸಿದ್ದರು’ ಎಂದು ತಿಳಿಸಿದರು.
‘ನಗರದಿಂದ ನಗರಕ್ಕೆ ವಾಸ್ತವ್ಯ ಬದಲಿಸುತ್ತಿದ್ದ ರೌಡಿ ಮಲ್ಲಿ, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಕುಟುಂಬಸ್ಥರನ್ನು ವಿಚಾರಿಸಿದಾಗ, ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಮಲ್ಲಿ ಜೀವಂತವಿರುವ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿದ್ದವು. ಅವುಗಳ ಸುಳಿವಿನಿಂದ ಮಲ್ಲಿ ಸಿಕ್ಕಿಬಿದ್ದ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.