ಬೆಂಗಳೂರು: ರಾಜರಾಜೇಶ್ವರಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಂಗಳವಾರ ನಡೆದ 26ನೇ ಪದವಿ ಪ್ರದಾನ ಸಮಾರಂಭದಲ್ಲಿ 139 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 94 ವಿದ್ಯಾರ್ಥಿಗಳು ಪದವಿ ಹಾಗೂ 45 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜರಾಜೇಶ್ವರಿ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎ.ಸಿ.ಷಣ್ಮುಗಂ ಮಾತನಾಡಿ, ‘ವೈದ್ಯರು ಮಾತೃ ಹೃದಯ ಹೊಂದಿರಬೇಕು. ಅಗತ್ಯ ಇರುವ ಜನತೆಗೆ ಸೇವೆ ಒದಗಿಸುವ ಹೃದಯವಂತಿಕೆ ಮೈಗೂಡಿಸಿಕೊಳ್ಳಬೇಕು’ ಎಂದು ಅವರು ಕಿವಿಮಾತು ಹೇಳಿದರು.
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹಿರಿದು. ಭವಿಷ್ಯ ರೂಪಿಸಿದ ಪೋಷಕರಿಗೆ ಮಕ್ಕಳು ಕೃತಜ್ಞರಾಗಿರಬೇಕು. ಕಲಿಕೆಯ ನಂತರವೂ ಕಾಲೇಜಿನೊಂದಿಗೆ ಉತ್ತಮ ಸಂಬಂಧ ಕಾಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಲಿಕೆ ಎಂಬುದು ನಿರಂತರ ಯಾನ. ವೃತ್ತಿ ಪ್ರೇಮ ಮತ್ತು ಬದ್ಧತೆಯೇ ಯಶಸ್ಸಿನ ಸೂತ್ರ. ವಿದ್ಯಾರ್ಥಿಗಳು ಪ್ರತಿ ದಿನ ಕಲಿಕೆಗೆ ಮುಂದಾಗಬೇಕು. ಆಗ ಮಾತ್ರ ಸ್ಫರ್ಧಾ ಜಗತ್ತಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದು ಗ್ಲಾಸ್ಗೊ ಯೂನಿವರ್ಸಿಟಿ ಸರ್ಜನ್ ಪ್ರೊ.ಡಾ.ಇಯಾನ್ ಎಡ್ವರ್ಡ್ ಸಲಹೆ ನೀಡಿದರು.
ಇದೇ ವೇಳೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಟಿ ರಚಿತಾ ರಾಮ್ ಉದ್ಘಾಟಿಸಿದರು.