ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅದರ ಜಾರಿ ಉದ್ದೇಶದಿಂದ ನಗರದ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ‘ಸುರಕ್ಷಿತ ನಗರ’ ವಿಷಯದಡಿ ಸಮ್ಮೇಳನ ನಡೆಯಿತು.
ಹನ್ಸ್ ಸೇಡೆಲ್ ಹಾಗೂ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ಶಿಪ್ ಆ್ಯಂಡ್ ಡೆಮಾಕ್ರಸಿ ಸಂಘಟನೆಗಳ ಸಹಯೋಗದಲ್ಲಿನಗರದ ಪೊಲೀಸರು ಈ ಸಮ್ಮೇಳನ ಹಮ್ಮಿಕೊಂಡಿದ್ದರು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸವಾಲುಗಳು ಹಾಗೂ ನೆರೆಹೊರೆಯ ಸುರಕ್ಷತೆ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಯಿತು.
ಕಮಿಷನರ್ ಭಾಸ್ಕರ್ ರಾವ್, ‘ಮಹಿಳೆಯರ ಸುರಕ್ಷತೆಯು ಮಾನವೀಯ ಸವಾಲು ಮಾತ್ರವಲ್ಲದೇ ಪ್ರಮುಖ ಆರ್ಥಿಕ ಸವಾಲುಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.
ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್, ‘ಹಿಂಸೆ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟಬೇಕು. ನಗರದ ಬೀದಿಗಳಲ್ಲಿ ಮಹಿಳೆಯರು ಧೈರ್ಯವಾಗಿ ನಡೆಯುವಂತೆ ಮಾಡಬೇಕು’ ಎಂದರು.
ಜನಾಗ್ರಹ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್, ‘ನಗರದ 108 ಠಾಣೆಗಳಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದೆ. 650ಕ್ಕೂ ಹೆಚ್ಚು ಸುರಕ್ಷಾ ಮಿತ್ರರು ಇದ್ದಾರೆ. ಅವರೆಲ್ಲ ಸೇರಿ ಸುರಕ್ಷಿತ ನಗರ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಹೇಳಿದರು.