ಬೆಂಗಳೂರು: ‘ಸಂಸ್ಕೃತ ಶಿಕ್ಷಣ ಸಂಸ್ಥೆಗಳು ಹೆಚ್ಚಾದರೂ ಸಂಸ್ಕೃತ ಮಾತನಾಡುವ ವಿದ್ಯಾರ್ಥಿಗಳು ಕಡಿಮೆ. ಜನರ ಆಡು ಭಾಷೆಯಾದಾಗ ಮಾತ್ರ ಭಾಷೆ ಬೆಳೆಯುತ್ತದೆಯೇ ಹೊರತು, ಸಾಹಿತ್ಯ ರಚನೆಯಿಂದಲ್ಲ. ಸಂಸ್ಕೃತವನ್ನು ವ್ಯಾವಹಾರಿಕ ಭಾಷೆಯನ್ನಾಗಿ ಬಳಸಬೇಕು’ ಎಂದು ದೆಹಲಿಯ ಸಂಸ್ಕೃತ ಸಂವರ್ಧನ ಪ್ರತಿಷ್ಠಾನದ ಚಮೂ ಕೃಷ್ಣಶಾಸ್ತ್ರಿ ತಿಳಿಸಿದರು.
ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ಸೋಮವಾರ ಆಯೋಜಿಸಿದ್ದ ‘ಸ್ನಾತಕಪೂರ್ವ ದೀಕ್ಷಾಂತ ಸಮಾರೋಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ಭಾಷೆಗಳ ಶೇ 80ಕ್ಕೂ ಹೆಚ್ಚು ಮೂಲ ಪದಗಳು ಸಂಸ್ಕತದಿಂದ ಬಂದಿವೆ. ಈಗಿನ ಪರಿಸ್ಥಿತಿ ಗಮನಿಸಿದರೆ, ಸಂಸ್ಕೃತ ಸಾಹಿತ್ಯ ಬೋಧಕರು ಹಾಗೂ ಇತರೆ ವಿಷಯಗಳ ಬೋಧಕರಿಗೆ ವೇತನ ತಾರತಮ್ಯ ಇದೆ. ಇದನ್ನು ಸರ್ಕಾರ ನಿವಾರಿಸಬೇಕು’ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ‘ನಮ್ಮಲ್ಲಿ ಸಂಸ್ಕೃತ, ಸಂಸ್ಕೃತಿ ಎರಡೂ ಇದೆ. ಆದರೆ, ಸಂಸ್ಕೃತಿ ಉಳಿಸಿಕೊಂಡು ಸಂಸ್ಕೃತ ಮರೆತಿದ್ದೇವೆ. ಸಂಸ್ಕೃತರಿಂದಲೇಸಮಾಜ ಸುಸಂಸ್ಕೃತವಾಗುತ್ತದೆ’ ಎಂದರು.