ಬೆಂಗಳೂರು: ಪರಿಶಿಷ್ಟ ಪಂಗಡ ಮತ್ತು ಜಾತಿಯಲ್ಲಿಯೇ (ಎಸ್ಸಿ–ಎಸ್ಟಿ) ತಳ ಸಮುದಾಯಗಳಾದ ವಿಮುಕ್ತ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು. ಈ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಎಚ್ಚರಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಹಾಸಭಾದ ಮುಖಂಡರು ಈ ಒತ್ತಾಯ ಮಾಡಿದರು. ‘ಮುಂದಿನ ಬಜೆಟ್ನಲ್ಲಿ, ಅಲೆಮಾರಿ ಅಭಿವೃದ್ಧಿ ಕೋಶವನ್ನು ವಿಮುಕ್ತ ಅಲೆಮಾರಿ ನಿಗಮವನ್ನಾಗಿ ಪರಿವರ್ತಿಸಬೇಕು. ಸಮುದಾಯದ ಅಭಿವೃದ್ಧಿಗೆ ₹250 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಬೇಕು’ ಎಂದು ಸಂಘಟನೆಯ ಅಧ್ಯಕ್ಷ ಡಾ. ಬಾಲಗುರುಮೂರ್ತಿ ಒತ್ತಾಯಿಸಿದರು.
‘ರಾಜ್ಯದಲ್ಲಿ 20 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಅತ್ಯಂತ ಶೋಷಿತ ತಳ ಸಮುದಾಯವಿದು. ಅಲೆಮಾರಿ, ಆದಿವಾಸಿ, ಅರಣ್ಯಮೂಲ ಬುಡಕಟ್ಟುಗಳು ಇನ್ನು ಮುಂದೆ ಒಗ್ಗೂಡಿ ಹೋರಾಡಬೇಕು. ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ರಾಜ್ಯದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ‘ಸಮಾಜ ಕಲ್ಯಾಣ ಇಲಾಖೆಯು ಅಲೆಮಾರಿಗಳ ಕಲ್ಯಾಣವನ್ನು ಮರೆತಿದೆ.ರಾಜ್ಯದಲ್ಲಿ ಜಾತಿಗೊಂದು ನಿಗಮವನ್ನು ರಾತ್ರೋರಾತ್ರಿ ಘೋಷಣೆ ಮಾಡುವ ಸರ್ಕಾರ ಅಲೆಮಾರಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಲೆಮಾರಿಗಳು ಇಂದಿಗೂ ಟೆಂಟ್ನಲ್ಲಿ ವಾಸಿಸುತ್ತಿದ್ದಾರೆ’ ಎಂದರು.
ಕಾರ್ಯಾಧ್ಯಕ್ಷ ವೆಂಕಟರಮಣಯ್ಯ, ‘ಜಾತಿ ಪತ್ರ ನೀಡುವುದಕ್ಕೇ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಕೂಡಲೇ ಅಲೆಮಾರಿ ಆಯೋಗವನ್ನು ರಚನೆ ಮಾಡಬೇಕು’ ಎಂದು ಒತ್ತಾಯಿಸಿದರು.