ಬೆಂಗಳೂರು: ರಾಜಗೋಪಾಲನಗರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀನಿವಾಸ್ ಅಲಿಯಾಸ್ ಕರಿ ಸೀನ ಎಂಬುವರ ಕೊಲೆ ಪ್ರಕರಣದ ಆರೋಪಿ ಸಂತೋಷ್ ಅಲಿಯಾಸ್ ಇಲಿಕುಟ್ಟಿ (21) ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿದೆ.
‘ಸ್ಥಳೀಯ ನಿವಾಸಿಯಾದ ಸಂತೋಷ್, ಅಪರಾಧ ಹಿನ್ನೆಲೆಯುಳ್ಳವ. ರಾಜಗೋಪಾಲನಗರದ ಠಾಣೆ ರೌಡಿ ಪಟ್ಟಿಯಲ್ಲಿ ಆತನ ಹೆಸರಿತ್ತು. ತನ್ನ ಸಹಚರರ ಜೊತೆ ಸೇರಿ ಸಂಚು ರೂಪಿಸಿ ಶ್ರೀನಿವಾಸ್ ಅವರನ್ನು ಜ. 9ರಂದು ಕೊಲೆ ಮಾಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಸಹಚರರು ತಲೆಮರೆಸಿಕೊಂಡು ಓಡಾಡುತ್ತಿದ್ದರು. ಮಂಗಳವಾರ ನಸುಕಿನಲ್ಲಿ ಆರೋಪಿಗಳು ಜಿಕೆಡಬ್ಲ್ಯು ಲೇಔಟ್ ಬಳಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪಿಎಸ್ಐ ಹನುಮಂತ ಹಾದಿಮನಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು.’
‘ಪೊಲೀಸರನ್ನು ನೋಡಿದ ಆರೋಪಿಗಳು, ಪರಾರಿಯಾಗಲು ಯತ್ನಿಸಿದ್ದರು. ಹಿಡಿಯಲು ಹೋದ ಹೆಡ್ ಕಾನ್ಸ್ಟೆಬಲ್ ಸಿದ್ದರಾಮ ಮೇಲೆ ಆರೋಪಿ ಸಂತೋಷ್ ಮಚ್ಚಿನಿಂದ ಹಲ್ಲೆ ಮಾಡಿದ್ದ. ಅದೇ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ಐ ಹನುಮಂತ, ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದರು’ ಎಂದೂ ಅಧಿಕಾರಿ ತಿಳಿಸಿದರು.
‘ಸ್ಥಳದಲ್ಲೇ ಕುಸಿದು ಬಿದ್ದ ಆರೋಪಿಯನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಹೆಡ್ಕಾನ್ಸ್ಟೆಬಲ್ ಸಿದ್ದರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಅವರು ಹೇಳಿದರು.