ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮೇಲೆ, ಪಾದಚಾರಿಗಳು ಕೆಳಗೆ!

ಬಹುತೇಕ ಮೇಲ್ಸೇತುವೆಗಳನ್ನು ಬಳಸುವವರೇ ಇಲ್ಲ l ಸೇತುವೆ ನಿರ್ವಹಣೆಗೆ ಹಿಡಿದಿದೆ ಗ್ರಹಣ
Last Updated 25 ಜನವರಿ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸೇತುವೆಗಳು ಮೇಲಿವೆ... ಪಾದಚಾರಿಗಳು ಕೆಳಗೇ ಇದ್ದಾರೆ!

ಪಾದಚಾರಿಗಳಿಗೆಂದು ನಗರದ ವಿವಿಧೆಡೆ ಸೇತುವೆ ನಿರ್ಮಿಸಿದರೆ ಅದನ್ನು ಬಳಸಲು ಜನರೇ ಉದಾಸೀನ ತೋರಿ
ಸುತ್ತಿದ್ದಾರೆ. ಜತೆಗೆ ಸೇತುವೆ ನಿರ್ವಹಣೆಯ ಕೊರತೆ ಸಹ ಮೇಲ್ಸೇತುವೆಗಳ ಕಡೆ ಜನರನ್ನು ಮುಖ ಹಾಕದಂತೆ ಮಾಡಿದೆ. ನುಗ್ಗಿ ಬರುವ ವಾಹನದ ಸಾಲುಗಳ ಮಧ್ಯೆಯೇ ಜನ ರಸ್ತೆ ದಾಟುವ ಮೂಲಕ ಅಪಾಯ ತಂದುಕೊಳ್ಳುತ್ತಿದ್ದಾರೆ.

ಲಿಫ್ಟ್‌ ಇಲ್ಲ, ಮೆಟ್ಟಿಲು ಏರಲಾಗದು, ಭದ್ರತಾ ಸಿಬ್ಬಂದಿ ಇಲ್ಲ ಎನ್ನುವನೆಪಗಳು ಸೇತುವೆ ಬಳಕೆಯಿಂದ ಅವರನ್ನು ದೂರ ಇಟ್ಟಿವೆ. ಸಂಪಂಗಿರಾಮನಗರದಬಳಿ ಇತ್ತೀಚೆಗೆ ಉದ್ಘಾಟನೆಗೊಂಡ ಸೇತುವೆ, ಮಹಾರಾಣಿ ಕಾಲೇಜು ಬಳಿಯ ಸೇತುವೆ, ಕೆ.ಎಚ್‌.ರಸ್ತೆಯ ಬಳಿಯ ಸೇತುವೆಗಳು ಬಳಕೆಯಾಗದೆ ದೂಳು ಹಿಡಿದಿವೆ.ಕಾವೇರಿ ಭವನದ ಮುಂಭಾಗದ ಸೇತುವೆ ಮತ್ತುಬಿಬಿಎಂಪಿ ಕೇಂದ್ರ ಕಚೇರಿ ಹತ್ತಿರದ ಸೇತುವೆ ಕನಿಷ್ಠ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಸಂಪಂಗಿರಾಮನಗರದಶನೇಶ್ವರ ದೇವಸ್ಥಾನದ ಕಡೆಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ತೆರಳಲು ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಇದುಕಳೆದ ನವೆಂಬರ್‌ನಲ್ಲಿಯೇ ಉದ್ಘಾಟನೆಗೊಂಡಿದೆ.

ಲಿಫ್ಟ್‌ಗಳು ಕಾರ್ಯಾರಂಭಿಸಿಲ್ಲ. ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಮೆಟ್ಟಿಲುಗಳ ಮೇಲೆ ದುಷ್ಕರ್ಮಿಗಳುಮೂತ್ರ ವಿಸರ್ಜನೆ ಮಾಡುತ್ತಾರೆ. ರಾತ್ರಿ ಸೇತುವೆಯ ಮೇಲೆ ನಿರ್ಗತಿಕರು ವಾಸ ಮಾಡುತ್ತಾರೆ ಎಂದು ಇಲ್ಲಿಯ ನಿವಾಸಿಗಳು ಹೇಳಿದರು.

ಇಲ್ಲಿ ಒಂದು ಗಂಟೆ ಕಾದು ನೋಡಿದಾಗ ಕೇವಲ ಹತ್ತು ಜನ ಮೇಲ್ಸೇತುವೆಯನ್ನು ಬಳಸಿದ್ದು ಕಂಡು
ಬಂತು. ಇದೇ ಅವಧಿಯಲ್ಲಿ ಮೂವತ್ತು ಜನ ವಾಹನಗಳ ಮಧ್ಯೆ ರಸ್ತೆ ದಾಟಿದರು. ಹಾಗೆ ರಸ್ತೆ ದಾಟಿದವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದು, ಅಚ್ಚರಿ ಮೂಡಿಸಿತು.

ಪಾದಚಾರಿಯೊಬ್ಬರನ್ನು ಮಾತನಾಡಿಸಿದಾಗ, ‘45 ಮೆಟ್ಟಿಲುಗಳನ್ನು ಹತ್ತಿ ಯಾರು ಹೋಗುತ್ತಾರೆ? 15 ಹೆಜ್ಜೆ ಇಟ್ಟರೆ ರಸ್ತೆ ದಾಟಬಹುದು’ ಎಂದರು.

ನಗರದ ಪ್ರಮುಖ ರಸ್ತೆಯಾದ್ದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಮಹಾರಾಣಿ ಕಾಲೇಜು ವೃತ್ತದ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಆದರೆಮೇಲ್ಸೇತುವೆಗೆ ಲಿಫ್ಟ್‌ಗಳಿಲ್ಲ. ಕಾಲೇಜು ವಿದ್ಯಾರ್ಥಿಗಳು ಮೆಟ್ಟಿಲು
ಗಳನ್ನು ಯಾರು ಹತ್ತಬೇಕು ಎನ್ನುವ ಉದಾಸೀನತೆಯಿಂದ ವಾಹನಗಳ ಮಧ್ಯೆ ರಸ್ತೆ ದಾಟುತ್ತಾರೆ.

ರಸ್ತೆ ದಾಟುತ್ತಿದ್ದವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ, ‘ಮೇಲಿಂದ ರಸ್ತೆ ದಾಟುವುದಕ್ಕೆ ಸಮಯ ಹಿಡಿಯುತ್ತದೆ. ಅದಕ್ಕಾಗಿ ವಾಹನಗಳ ಸಂಖ್ಯೆ ಕಡಿಮೆಯಾದಾಗ ಕೆಳಗಿನಿಂದಲೇ ರಸ್ತೆ ದಾಟುತ್ತೇವೆ’ ಎಂದರು.

ಕೆ.ಜಿ.ರಸ್ತೆಯ ಕಾವೇರಿ ಭವನದ ಎದುರಿನಮೇಲ್ಸೇತುವೆಯಲ್ಲಿ ಎರಡು ಲಿಫ್ಟ್‌ಗಳಿವೆ. ಅದರಲ್ಲಿ ಒಂದು ಕಾರ್ಯನಿರ್ವಹಿಸುತ್ತಿಲ್ಲ.ಇಲ್ಲಿಯ ಕಚೇರಿ ಹಾಗೂ ಕೋರ್ಟ್‌ಗೆ ಬರುವ ಜನ ವಾಹನಗಳ ಮಧ್ಯೆ ರಸ್ತೆ ದಾಟುತ್ತಾರೆ.

ನಗರದಲ್ಲಿರುವ ಬಹುತೇಕ ಮೇಲ್ಸೇತುವೆಗಳ ಸ್ಥಿತಿ ಇದೇ ರೀತಿ ಇದೆ.ಸೇತುವೆಗಳು ಜಾಹೀರಾತು ಫಲಕ ಪ್ರದರ್ಶನಕ್ಕಷ್ಟೇ ಪ್ರಯೋಜನಕಾರಿಯಾಗಿವೆ ಎಂದು ಹೇಳುತ್ತಾರೆ ಪಾದಚಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT