ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಮಕ್ಕಳ ಹಬ್ಬದ ವೇಳೆ ಚಿಣ್ಣರು ಆಟೋಟಗಳಲ್ಲಿ ತಲ್ಲೀನರಾಗಿದ್ದರೆ, ಬಿಬಿಎಂಪಿಯ ವನ್ಯಜೀವಿ ರಕ್ಷಣಾ ಕಾರ್ಯಕರ್ತರ ತಂಡ ನಾಗರಹಾವು ಹಿಡಿಯಲು ಬೆವರು ಹರಿಸುತ್ತಿತ್ತು.
ಹಬ್ಬದ ಪ್ರಯುಕ್ತ ಸಾವಿರಾರು ಮಂದಿ ಉದ್ಯಾನದಲ್ಲಿ ಸೇರಿದ್ದ ವೇಳೆ ನಾಗರಹಾವೊಂದು ಮಕ್ಕಳ ಗ್ರಂಥಾಲಯದ ಕಟ್ಟಡದ ಬಳಿ ಕಾಣಿಸಿಕೊಂಡಿತ್ತು. ಬಾಲಭವನದ ಸಿಬ್ಬಂದಿ ಈ ಬಗ್ಗೆ ಬಿಬಿಎಂಪಿ ಸಹಾಯವಾಣಿಗೆ ಸುದ್ದಿ ಮುಟ್ಟಿಸಿದ್ದರು.
‘ನಮ್ಮ ತಂಡದ ಸದಸ್ಯರ ಜೊತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಹಾವನ್ನು ಕಂಡರೆ ಜನ ಕಂಗಾಲಾಗುವ ಸಾಧ್ಯತೆ ಇತ್ತು. ಹಾಗಾಗಿ ಸದ್ದಿಲ್ಲದೇ ಹಾವನ್ನು ಹಿಡಿದೆವು’ ಎಂದು ವನ್ಯಜೀವಿ ವಾರ್ಡನ್ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾಗರಹಾವು ಸುಮಾರು 3 ಅಡಿ ಉದ್ದವಿತ್ತು. ಇದನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದೇವೆ’ ಎಂದು ಅವರು ತಿಳಿಸಿದರು.
‘ಕಬ್ಬನ್ ಉದ್ಯಾನದಂತಹ ಪ್ರಶಾಂತ ವಾತಾವರಣ ಹಾವುಗಳ ಸಹಜ ಆವಾಸಸ್ಥಾನ. ಇಲ್ಲಿ ಓಡಾಡುವಾಗ ಜನ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು’ ಎಂದು ಅವರು ಕಿವಿಮಾತು ಹೇಳಿದರು.
ಜೊತೆಗೆ ಇನ್ನೆರಡು ಕೇರೆ ಹಾವುಗಳನ್ನೂ ವನ್ಯಜೀವಿ ರಕ್ಷಕರ ತಂಡವು ಹಿಡಿದಿದೆ.