ಕೆಂಗೇರಿ: ‘ಮೂರು ವರ್ಷಗಳ ನಂತರ ನಾನು ಮತ್ತೆ ಪಕ್ಷ ಬದಲಿಸುತ್ತೇನೆ ಎಂಬ ಊಹಾಪೋಹ ಹರಿದಾಡುತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಪಕ್ಷ ಬದಲಿಸಿದ್ದೇನೆ. ಪದೇ ಪದೇ ಪಕ್ಷಾಂತರ ಮಾಡಲು ಅದೇನು ಮಕ್ಕಳಾಟವಲ್ಲ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಯಶವಂತಪುರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ಕಾರ್ಯಕರ್ತರನ್ನು ಕಡೆಗಣಿಸಿದರೆ ಪಕ್ಷದ ಏಳಿಗೆ ಅಸಾಧ್ಯ. ಕಾರ್ಯಕರ್ತರೇ ಪಕ್ಷದ ಜೀವಾಳ. ಲಕ್ಷಾಂತರ ಕಾರ್ಯಕರ್ತರ ಬೆಂಬಲದಿಂದ ನಾಯಕ ರೂಪುಗೊಳ್ಳುತ್ತಾನೆ. ಅದೇ ಕಾರ್ಯಕರ್ತರು ಪಕ್ಷದ ಬಗ್ಗೆ ನಿರಾಸಕ್ತಿ ತೋರಿದರೆ ಪಕ್ಷವು ನೆಲ ಕಚ್ಚಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಿ.ಎಂ.ಮಾರೇಗೌಡ, ಬಿ.ಬಿ.ಎಂ.ಪಿ ಸದಸ್ಯರಾದ ರಾಜಣ್ಣ, ಆರ್ಯ ಶ್ರೀನಿವಾಸ್, ವಿ.ವಿ.ಸತ್ಯನಾರಾಯಣ, ಮಾಜಿ ಸದಸ್ಯ ರ.ಆಂಜನಪ್ಪ ಉಪಸ್ಥಿತರಿದ್ದರು.
ಯಶವಂತಪುರ ಮಂಡಲ ಬಿಜೆಪಿ ಗ್ರಾಮೀಣ ಅಧ್ಯಕ್ಷರಾಗಿ ರಂಗರಾಜ್ ಹಾಗೂ ನಗರ ಅಧ್ಯಕ್ಷ ಅನಿಲ್ ಚಳಗೇರಿ ಅವರಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು.