ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕಾರಣಿಗಳು, ಸ್ವಾಮೀಜಿಗಳು ಹಾಗೂ ಅಧಿಕಾರಿಗಳ ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು,ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಇನ್ಸ್ಪೆಕ್ಟರ್ಗಳನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದರು.
‘ಕರೆಗಳನ್ನು ಕದ್ದಾಲಿಸಿದ್ದ ಹಾಗೂ ಸಾಕ್ಷ್ಯಾಧಾರ ನಾಶಪಡಿಸಿದ್ದ’ ಆರೋಪ ಎದುರಿಸುತ್ತಿರುವ ಸಿಸಿಬಿ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ ಮಿರ್ಜಾ ಅಲಿ ಸೇರಿದಂತೆ ಆರು ಮಂದಿ ಇನ್ಸ್ಪೆಕ್ಟರ್ಗಳನ್ನು ಇತ್ತೀಚೆಗಷ್ಟೇ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿತ್ತು.
ಭಾನುವಾರ ಮಧ್ಯಾಹ್ನ ಒಟ್ಟಿಗೆ ಆರು ಮಂದಿ ಇನ್ಸ್ಪೆಕ್ಟರ್ಗಳನ್ನು ಕುಮಾರ ಕೃಪ ಅತಿಥಿ ಗೃಹದಲ್ಲಿರುವ ಕಚೇರಿಗೆ ಕರೆಸಿದ್ದ ಸಿಬಿಐ ಎಸ್ಪಿ ಕಿರಣ್ ನೇತೃತ್ವದ ತಂಡ, ಮುಖಾಮುಖಿಯಾಗಿ ವಿಚಾರಣೆ ನಡೆಸಿತು.
ಸಂಜೆ 5ರವರೆಗೂ ನಡೆದ ವಿಚಾರಣೆಯಲ್ಲಿ ಇನ್ಸ್ಪೆಕ್ಟರ್ಗಳು ಸಿಬಿಐ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಹಿಂದೆ ಇನ್ಸ್ಪೆಕ್ಟರ್ಗಳು ನೀಡಿದ್ದ ಹೇಳಿಕೆಯನ್ನು ಪರಸ್ಪರ ಹೋಲಿಕೆ ಮಾಡಿ ಸ್ಪಷ್ಟನೆ ಸಹ ಪಡೆಯಲಾಯಿತು ಎಂಬುದು ಗೊತ್ತಾಗಿದೆ.