ಈ ಬಗ್ಗೆ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರು ಮಹೇಶ ಜೋಶಿಗೆ ಪತ್ರ ಬರೆದಿದ್ದಾರೆ. ‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಕೆಲವು ಶಿಫಾರಸುಗಳ ಬಗ್ಗೆ ಕೆಲ ಸಾಹಿತಿಗಳು, ಚಿಂತಕರು, ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರಾಹ್ಮಣ್ಯ ಮತ್ತು ಶೂದ್ರರ ಪಠ್ಯಗಳೆಂದು ಪರಸ್ಪರ ಗುದ್ದಾಡುವ ಪರಿಸ್ಥಿತಿ ಬಂದಿರುವುದು ನಾಡಿನ ದುರ್ದೈವ. ಇಲ್ಲಿನ ಮಕ್ಕಳಿಗೆ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ರಾಜ್ಯ ಮತ್ತು ದೇಶದ ಏಳ್ಗೆಗೆ ದುಡಿದ ಮಹನೀಯರ ಜೀವನದ ಶ್ರೇಷ್ಠತೆ ಸಾರುವ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಜಾತ್ಯತೀತವಾಗಿ ಪರಿಚಯ ಮಾಡುವ ಬದಲು, ಶ್ರೇಷ್ಠರೆನಿಸಿಕೊಂಡಿರುವ ಬುದ್ಧಿವಂತರು ಬೀದಿ ಕಾಳಗ ಮಾಡುತ್ತಿರುವುದು ಶೋಚನೀಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.