ಬೆಂಗಳೂರು: ಹೆಣ್ಣು, ಹೆಣ್ಣಿನ ದೇಹ ಎಲ್ಲ ನನಗೇ ಸೇರಿದ್ದು ಎನ್ನುವ ಪುರುಷ ಪ್ರಧಾನ ಮನಸ್ಥಿತಿಯ ವ್ಯವಸ್ಥೆಯೇ ಮಹಿಳೆಯರಿಗೆ ಶತ್ರು ಎಂದು ಮಹಿಳಾಪರ ಹೋರಾಟಗಾರ್ತಿ ಎನ್. ಗಾಯತ್ರಿ ಹೇಳಿದರು.
ಭಾರತೀಯ ಮಹಿಳಾ ಒಕ್ಕೂಟದ ಬೆಂಗಳೂರು ಜಿಲ್ಲಾ 5ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಎಷ್ಟೇ ಇದ್ದರೂ ದೌರ್ಜನ್ಯ ನಿಂತಿಲ್ಲ. ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡಲು ಮಹಿಳಾ ಸಂಸದರೇ ಪ್ರಯತ್ನಿಸಲಿಲ್ಲ. ನಮ್ಮನ್ನು ಒಡೆದಾಳುವ ದುಷ್ಟಶಕ್ತಿಗಳೇ ಇದಕ್ಕೆ ಕಾರಣ. ಈ ದುಷ್ಟ ಶಕ್ತಿಗಳನ್ನು ದೂರ ಇಡಬೇಕು ಎಂದು ತಿಳಿಸಿದರು.
ಮಣಿಪುರ ಸೇರಿದಂತೆ ದೇಶದ ವಿವಿಧೆಡೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಎಲ್ಲ ಪ್ರಜ್ಞಾವಂತರು ಧ್ವನಿ ಎತ್ತಬೇಕು ಎಂದು ಕೊಯಮುತ್ತೂರಿನ ಕಾರ್ಪೊರೇಟರ್ ಮಲ್ಲಿಕಾ ಪುರುಷೋತ್ತಮ್ ಕರೆ ನೀಡಿದರು.
ಸಂಘಟನೆ ರಾಜ್ಯಾಧ್ಯಕ್ಷೆ ಜ್ಯೋತಿ ಎ. ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಮುಖಂಡ ಹನುಮಂತಪ್ಪ, ಎಐವೈಎಫ್ನ ಎಚ್.ಎಂ. ಸಂತೋಷ್, ಹರೀಶ್ ಬಾಲಾ, ಗುರುವಯ್ಯ ಮಾತನಾಡಿದರು.
ಜಿಲ್ಲಾ ಮಂಡಳಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷೆ ದಿವ್ಯಾ ಎಸ್. ಬಿರಾದಾರ ಅಧ್ಯಕ್ಷೆ. ಉಮಾ ಉಪಾಧ್ಯಕ್ಷೆ. ಮಾಲಾ ಕಾರ್ಯದರ್ಶಿ, ಜಯಂತಿ ಸಹ ಕಾರ್ಯದರ್ಶಿ, ರಾಜಲಕ್ಷ್ಮೀ ಖಜಾಂಚಿಯಾದರು.