ಬೆಂಗಳೂರು: ಹೊಸೂರು ರಸ್ತೆಯ ರೂಪೇನ್ ಅಗ್ರಹಾರದ ಮೇಲ್ಸೇತುವೆ ಬಳಿ ವೈದ್ಯ ಶಿವಕುಮಾರ್ ಎಂಬುವರ ಕಾರು ತಡೆದು ಗಮನ ಬೇರೆಡೆ ಸೆಳೆದಿದ್ದ ದುಷ್ಕರ್ಮಿಗಳು, ಕಾರಿನಲ್ಲಿದ್ದ ಎರಡು ಮೊಬೈಲ್ಗಳನ್ನು ಕದ್ದುಕೊಂಡು ಹೋಗಿದ್ದಾರೆ.
ಈ ಸಂಬಂಧ ಶಿವಕುಮಾರ್ ಅವರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಇದೇ 13ರಂದು ಸಂಜೆ 6.30ರ ಸುಮಾರಿಗೆ ಕಾರಿನಲ್ಲಿ ಹೊರಟಿದ್ದೆ. ಎದುರಿಗೆ ಬಂದಿದ್ದ ದುಷ್ಕರ್ಮಿ, ‘ನಿಮ್ಮ ಕಾರು ನನ್ನ ಬೈಕ್ಗೆ ಡಿಕ್ಕಿ ಹೊಡೆದಿದೆ. ನನ್ನ ಕಾಲಿಗೂ ಗಾಯವಾಗಿದೆ’ ಎಂದು ಕೂಗಾಡಿದ್ದ’ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
‘ಏನಾಯಿತು ಎಂದು ನೋಡಲು ಕಾರಿನ ಕಿಟಕಿಯ ಗಾಜು ಇಳಿಸಿದ್ದೆ. ಅದೇ ವೇಳೆಯೇ ಇನ್ನೊಬ್ಬ ದುಷ್ಕರ್ಮಿ, ಕಿಟಕಿಯಲ್ಲಿ ಕೈ ಹಾಕಿ ಸೀಟಿನ ಮೇಲಿದ್ದ ₹70,000 ಮೌಲ್ಯದ ಎರಡು ಮೊಬೈಲ್ಗಳನ್ನು ಕದ್ದುಕೊಂಡು ಹೋದ. ನನ್ನ ಕಾರು ತಡೆದಿದ್ದ ದುಷ್ಕರ್ಮಿ ಸಹ ಆತನ ಹಿಂದೆಯೇ ಪರಾರಿಯಾದ’ ಎಂದು ಹೇಳಿದ್ದಾರೆ.