ಬೆಂಗಳೂರು: ಕುಡಿದ ನಶೆಯಲ್ಲಿ ಕಾರು ಚಾಲಕನೊಬ್ಬ ಚಾಕುವಿನಿಂದ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಮಾದನಾಯಕಹಳ್ಳಿಯಲ್ಲಿ ನಡೆದರೆ, ರಾಮಮೂರ್ತಿನಗರದ ಬೋವಿ ಕಾಲೊನಿಯಲ್ಲಿ ಕೂಲಿ ಕಾರ್ಮಿಕನೊಬ್ಬ ತನ್ನ ಜೊತೆಗಾರನ ತಲೆಯನ್ನು ಗೋಡೆಗೆ ಗುದ್ದಿ ಕೊಂದಿದ್ದಾನೆ.
ಆರ್.ಟಿ. ನಗರದ ಮಠದಹಳ್ಳಿ ಬಳಿ ಸ್ನೇಹಿತರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಮೂರೂ ಘಟನೆ ಬುಧವಾರ ರಾತ್ರಿ ನಡೆದಿದ್ದು, ಮದ್ಯದ ಅಮಲೇ ಕೃತ್ಯಕ್ಕೆ ಕಾರಣವಾಗಿದೆ.
ಪತಿಯಿಂದ ಪತ್ನಿ ಕೊಲೆ: ಮಾದನಾಯಕಹಳ್ಳಿಯ ಸಿದ್ದೇಶ್ವರ ಬಡಾವಣೆಯ ನಿವಾಸಿ ತೀರ್ಥಪ್ರಸಾದ್ ಎಂಬಾತ ಪತ್ನಿ ದಿವ್ಯಾಳನ್ನು (24) ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕುಡಿದು ಬಂದು ನಿತ್ಯ ಪತ್ನಿ ಜೊತೆ ಜಗಳ ಮಾಡುತ್ತಿದ್ದ ತೀರ್ಥಪ್ರಸಾದ್ಗೆ ಲಾಕ್ಡೌನ್ ಕಾರಣಕ್ಕೆ ಕೆಲವು ದಿನಗಳಿಂದ ಎಲ್ಲಿಯೂ ಮದ್ಯ ಸಿಕ್ಕಿರಲಿಲ್ಲ.
ಮದ್ಯದಂಗಡಿ ತೆರಯುತ್ತಿದ್ದಂತೆ ಕುಡಿದು ಮನೆಗೆ ಬಂದು ಜಗಳ ಮಾಡಲು ಆರಂಭಿಸಿದ್ದ. ಬುಧವಾರ ರಾತ್ರಿಯೂ ಕುಡಿದು ಬಂದಿದ್ದ ವೇಳೆ, ಪತಿ–ಪತ್ನಿ ಮಧ್ಯೆ ಜಗಳ ನಡೆದಿದೆ. ಮಾತು ವಿಕೋಪ ತಿರುಗಿದ್ದು, ಈ ವೇಳೆ ತೀರ್ಥಪ್ರಸಾದ್, ಪತ್ನಿಯ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಗೋಡೆಗೆ ಗುದ್ದಿ ಪರಾರಿ: ಮದ್ಯ ಹೆಚ್ಚು ಸೇವಿಸಿದ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕ ರಾಜು ಅಲಿಯಾಸ್ ರಾಜೇಶ್ (40 ) ಎಂಬಾತನ ತಲೆಯನ್ನು ಗೋಡೆಗೆ ಗುದ್ದಿ ಆತನ ಸ್ನೇಹಿತ ನೇತ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ನಾಲ್ಕು ದಿನಗಳಿಂದ ಇಬ್ಬರೂ ಜೊತೆಯಾಗಿ ಮದ್ಯ ಸೇವಿಸುತ್ತಿದ್ದರು. ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಆರೋಪಿಯ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೂರ್ವ ವಲಯ ಡಿಸಿಪಿ ಎಸ್.ಡಿ. ಶರಣಪ್ಪ ತಿಳಿಸಿದರು.
ಕೊಲೆಯಲ್ಲಿ ಅಂತ್ಯ: ಮಠದಹಳ್ಳಿ ರಸ್ತೆಯ ಬಳಿ ಕಿಶೋರ್ (28) ಎಂಬಾತನನ್ನು ಕೊಲೆ ಮಾಡಿದ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ ಎಂದು ಆರ್. ಟಿ. ನಗರ ಪೊಲೀಸರು ತಿಳಿಸಿದರು.
ಕೆಲಸ ಇಲ್ಲದೇ ಕಿಶೋರ್ ಮನೆಯಲ್ಲೇ ಇದ್ದ. ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಆತನ ಸ್ನೇಹಿತ ರಾಜೇಶ್, ಮದ್ಯ ತೆಗೆದುಕೊಂಡು ಬುಧವಾರ ರಾತ್ರಿ ಕಿಶೋರ್ ಮನೆಗೆ ಬಂದಿದ್ದ. ಇಬ್ಬರೂ ಜೊತೆಯಲ್ಲೇ ಮದ್ಯ ಸೇವಿಸಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ಚಾಕುವಿನಿಂದ ಕಿಶೋರ್ನ ಎದೆಗೆ ಇರಿದು ರಾಜೇಶ್ ಪರಾರಿಯಾಗಿದ್ದಾನೆ ಎಂದು ಉತ್ತರ ವಲಯ ಡಿಸಿಪಿ ಶಶಿಕುಮಾರ್ ತಿಳಿಸಿದರು.